ಬೆಂಗಳೂರು: ಮಂಗಳವಾರ ಬರಗೂರು ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಹಾಗೂ ಅಲೆಮಾರಿ ಜನಾಂಗದ ಹೋರಾಟಗಾರ್ತಿ ರಾಮಕ್ಕ ಅವರಿಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆ.ನೀಲಾ ಅವರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಿರ್ಲಕ್ಷ್ಯಕ್ಕೆ ಒಳಗಾದವರಲ್ಲಿ ಜಾಗೃತಿ ಮೂಡಿಸುವುದು ಕಷ್ಟದ ಕೆಲಸ. ಆದರೆ, ಯಾವುದಕ್ಕೂ ಜಗ್ಗದೆ ನೀಲಾ ಸಾಮಾಜಿಕ ಪರಿವರ್ತನೆ ತರುತ್ತಿದ್ದಾರೆ’ ಎಂದು ಹೇಳಿದರು.
‘ನೀಲಾ ಅವರ ಹೋರಾಟಗಳು ಎಲ್ಲರಿಗೂ ಸ್ಫೂರ್ತಿ ಹಾಗೂ ಪ್ರೇರಣೆ’ ಎಂದು ಬಣ್ಣಿಸಿದರು.
‘ಅಲೆಮಾರಿ ಸಮುದಾಯದ ಮಕ್ಕಳಿಗೆ ಸರಿಯಾದ ಶಿಕ್ಷಣ ಲಭಿಸುತ್ತಿಲ್ಲ. ರಾಮಕ್ಕ ಅವರು ಅಲೆಮಾರಿ ಮಕ್ಕಳಿಗಾಗಿಯೇ ಟೆಂಟ್ಶಾಲೆ ತೆರೆದು, ಶಿಕ್ಷಣ ಕೊಡಿಸುವ ಮೂಲಕ ಪರಿವರ್ತನೆ ತರುತ್ತಿದ್ದಾರೆ’ ಎಂದು ಹೇಳಿದರು.
‘ಮಹಿಳೆಗೆ ಸಮಾಜದಲ್ಲಿ ಅನೇಕ ಸವಾಲು ಎದುರಾಗುತ್ತಿವೆ. ಅವುಗಳನ್ನು ಮೆಟ್ಟಿನಿಂತು ಸಾಧನೆ ಮಾಡುತ್ತಿದ್ದಾಳೆ. ಈ ಸಾಧನೆಯಿಂದ ನೆಮ್ಮದಿಯೂ ದೊರೆಯುತ್ತಿದೆ. ಪುರುಷನ ಸಾಧನೆಯ ಹಿಂದೆ ಮಹಿಳೆಯೊಬ್ಬಳು ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾಳೆ’ ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ರಾಜಪ್ಪ ದಳವಾಯಿ, ವಕೀಲ ಸಿ.ಎಚ್.ಹನುಮಂತರಾಯ, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.