ಬೆಂಗಳೂರು: ‘ಅಧಿಕ ಶುಲ್ಕ ಪಡೆಯುವ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಾರೆ ಎಂಬ ತಪ್ಪುಕಲ್ಪನೆ ಹಲವರಲ್ಲಿದೆ. ಒಂದು ವೇಳೆ ಕಡಿಮೆ ಹಣದಲ್ಲಿಯೇ ಕಾಯಿಲೆಯನ್ನು ವಾಸಿ ಮಾಡಿದರೂ ಜನರು ಒಪ್ಪುವ ಮನಸ್ಥಿತಿಯಲ್ಲಿಲ್ಲ. ಇದರಿಂದ ಕಾಯಿಲೆಗಳು ಸಹ ದುಬಾರಿಯಾಗುತ್ತಿವೆ’ ಎಂದುಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ವಿಶ್ವ ಹೋಮಿಯೋಪಥಿ ದಿನಾಚರಣೆ ದತ್ತಿ ಉಪನ್ಯಾಸ’ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯಾವುದೇ ಕಾಯಿಲೆ ಬಂದ ತಕ್ಷಣ ವಾಸಿಯಾಗಬೇಕೆಂಬ ಮನೋಭಾವ ಬಂದಿದೆ. ವೈದ್ಯರು ಮಾತ್ರೆಯನ್ನು ಬರೆದುಕೊಡದಿದ್ದಲ್ಲಿ ಚಿಕಿತ್ಸೆ ಬಗ್ಗೆಯೇ ರೋಗಿಗಳು ಅನುಮಾನ ವ್ಯಕ್ತಪಡಿಸುತ್ತಾರೆ. ಅತಿಯಾಗಿ ಮಾತ್ರೆಗಳ ಸೇವನೆ ಮಾಡುವುದು ಸಹ ದೀರ್ಘಾವಧಿ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಅನಾರೋಗ್ಯಕ್ಕೆ ಒಳಗಾದಾಗ ಔಷಧ ಬಳಕೆಯನ್ನು ಕಡಿಮೆ ಮಾಡಿ, ಮಾನಸಿಕ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಔಷಧವೊಂದೇ ಪರಿಹಾರವಲ್ಲ: ‘ತಲೆನೋವು ಬಂದಿತು ಎಂಬ ಕಾರಣಕ್ಕೆ ಆಸ್ಪತ್ರೆಗೆ ತೆರಳಿದರೆ ವೈದ್ಯರು ಕೇಳುವ ಪ್ರಶ್ನೆಗಳು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಲಿವೆ. ವೈದ್ಯರು ಹಾಗೂ ರೋಗಿಗಳು ಧಾವಂತದಲ್ಲಿದ್ದಾರೆ. ಕೇಂದ್ರ ಸರ್ಕಾರ 2020ರ ವೇಳೆಗೆ ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯದೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಆದರೆ, ಹೋಮಿಯೋಪಥಿ ಹೊರತುಪಡಿಸಿ ಸಮಗ್ರ ಆರೋಗ್ಯ ಸೇವೆ ಒದಗಿಸಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಡಾ.ಬಿ.ಟಿ. ರುದ್ರೇಶ್ ತಿಳಿಸಿದರು.
‘ಎಲ್ಲದಕ್ಕೂ ಔಷಧ ಪರಿಹಾರ ಎಂಬ ಮನೋಭಾವ ಮರೆಯಾಗಲಿ. ಹೋಮಿಯೋಪಥಿಯಲ್ಲಿ ವೈದ್ಯರಾದವರು ಸ್ನೇಹಿತ, ಮಾರ್ಗದರ್ಶಕ ರಾಗಿರಬೇಕು. ದೇಶದಲ್ಲಿ 240 ಹೋಮಿಯೋಪಥಿ ಕಾಲೇಜುಗಳಿಂದ 3ಲಕ್ಷ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ವಿವರಿಸಿದರು.
*ಹೋಮಿಯೋಪಥಿಗೆ ಇದು ಚಿನ್ನದ ಕಾಲವಾಗಿದೆ. ಪರ್ಯಾಯ ವೈದ್ಯಕೀಯ ಪದ್ಧತಿ ಬೆಳೆಸಬೇಕು. ವಿಶ್ವವಿದ್ಯಾಲಯವು ಸಂಶೋಧನೆಗೆ ಒತ್ತು ನೀಡುತ್ತಿದೆ
-ಡಾ.ಎಸ್. ಸಚ್ಚಿದಾನಂದ, ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.