
ಸುದ್ದಿಗೋಷ್ಠಿಯಲ್ಲಿ (ಎಡದಿಂದ) ರಾಮಯ್ಯ ಸ್ಮಾರಕ ಆಸ್ಪತ್ರೆಯ ಡಾ. ಕೀರ್ತಿ ಕೌಶಿಕ್, ಡಾ. ವಿನಾಯಕ್ ವಿ. ಮಾಕಾ, ರಾಮಯ್ಯ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಕೆ. ಹರೀಶ್, ರಾಮಯ್ಯ ಸ್ಮಾರಕ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಮದನ್ ಗಾಯಕ್ವಾಡ್ ಮತ್ತು ಗೋಕುಲ ಶಿಕ್ಷಣ ಪ್ರತಿಷ್ಠಾನ ಮತ್ತು ಗೋಕುಲ ಶಿಕ್ಷಣ ಪ್ರತಿಷ್ಠಾನ (ವೈದ್ಯಕೀಯ) ಭಾಗವಹಿಸಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ರಾಮಯ್ಯ ಸ್ಮಾರಕ ಆಸ್ಪತ್ರೆಯು ಕ್ಯಾನ್ಸರ್ ಚಿಕಿತ್ಸೆಗೆ ದೇಶದಲ್ಲಿಯೇ ಮೊದಲ ಬಾರಿಗೆ ‘ಇಂಟ್ರಾ ಆಪರೇಟಿವ್ ರೇಡಿಯೇಶನ್ ಥೆರಪಿ (ಐಒಆರ್ಟಿ)’ ಪರಿಚಯಿಸಿದೆ’ ಎಂದು ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಅಂಕೋಸೈನ್ಸ್ನ ನಿರ್ದೇಶಕ ಡಾ. ಕೆ. ಹರೀಶ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮಯ್ಯ ಆಸ್ಪತ್ರೆ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಮೂರು ವಿಧಾನದಲ್ಲಿ ರೇಡಿಯೇಶನ್ ಥೆರಪಿ ಚಿಕಿತ್ಸೆ ನೀಡುವ ದಕ್ಷಿಣ ಭಾರತದ ಮೊದಲ ಆಸ್ಪತ್ರೆಯಾಗಿದೆ. ಕ್ಯಾನ್ಸರ್ ರೋಗಿಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸುವ ಸಂದರ್ಭದಲ್ಲಿ ಐಒಆರ್ಟಿ ಮೂಲಕ ನಿಗದಿತ ಕ್ಯಾನ್ಸರ್ ಗಡ್ಡೆಯ ಕೋಶಗಳನ್ನು (ಕ್ಯಾನ್ಸರ್ ಬೆಡ್ ಸೆಲ್ಗಳು) ನಾಶಪಡಿಸಲಾಗುತ್ತದೆ. ಈ ಚಿಕಿತ್ಸೆ ಆರೋಗ್ಯಕರ ಅಂಗಾಶಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ’ ಎಂದು ತಿಳಿಸಿದರು.
‘ರಾಮಯ್ಯ ಆಸ್ಪತ್ರೆಯಲ್ಲಿ ಐಒಆರ್ಟಿ ಬಳಸಿ ಸ್ತನ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ 55 ವರ್ಷ ಹಾಗೂ 49 ವರ್ಷದ ಇಬ್ಬರು ಮಹಿಳೆಯರಿಗೆ ಸರ್ಜಿಕಲ್ ಆ್ಯಂಡ್ ರೇಡಿಯೇಶನ್ ತಂಡ ಐಒಆರ್ಟಿ ಮೂಲಕ ಯಶಸ್ವಿಯಾಗಿ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಿದೆ‘ ಎಂದು ಹೇಳಿದರು.
‘ಕ್ಯಾನ್ಸರ್ ರೋಗಿಗಳ ಜೀವನದ ಗುಣಮಟ್ಟ ಹೆಚ್ಚಿಸುವಲ್ಲಿ ಐಒಆರ್ಟಿ ಸಹಾಯಕವಾಗಿದೆ. ಇತರೆ ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ಹೋಲಿಸಿದರೆ ಈ ಚಿಕಿತ್ಸೆಯಲ್ಲಿ ಅಡ್ಡಪರಿಣಾಮ ಕಡಿಮೆ. ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಅಡಿಯಲ್ಲಿ ಈ ಚಿಕಿತ್ಸೆಯನ್ನು ನೀಡಲಾಗುತ್ತಿದೆ’ ಎಂದು ಡಾ. ಕೀರ್ತಿ ಕೌಶಿಕ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.