ಬೆಂಗಳೂರು: ಕುಂಬಳಗೋಡು ಸಮೀಪದ ಕಾರ್ಖಾನೆಯ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ, ಕಾರ್ಖಾನೆಯ ಸಹೋದ್ಯೋಗಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಕೃತ್ಯದ ಬಗ್ಗೆ ಉತ್ತರ ಭಾರತದ 27 ವರ್ಷದ ಯುವತಿ ದೂರು ನೀಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ದೂರಿನ ವಿವರ: ‘ಕೆಲಸ ಕೊಡಿಸುವ ಆಮಿಷವೊಡ್ಡಿ ನನ್ನನ್ನು ನಗರಕ್ಕೆ ಕರೆತಂದಿದ್ದ ಏಜೆಂಟ್ನೊಬ್ಬ ಕಾರ್ಖಾನೆಗೆ ಸೇರಿಸಿದ್ದ. ಕೆಲಸದ ಸ್ಥಳದಲ್ಲಿ ಆರೋಪಿಗಳಾದ ಸುರೇಶ್ ಗೌರ್ ಅಲಿಯಾಸ್ ಕಿರಣ್ ಹಾಗೂ ನೂರ್ ಇಸ್ಲಾ ಅನ್ಸಾರಿ ಎಂಬುವರು ಕಿರುಕುಳ ನೀಡಲಾರಂಭಿಸಿದ್ದರು’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
‘ತಿಂಗಳಿಗೆ ₹9,000 ವೇತನ ನೀಡುವುದಾಗಿ ಹೇಳಿ, ವಾರಕ್ಕೆ ಕೇವಲ ₹200 ನೀಡುತ್ತಿದ್ದರು. ಆರೋಪಿಗಳ ಕಿರುಕುಳ ಹೆಚ್ಚಾದಾಗ ಕಾರ್ಖಾನೆಯಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದೆ. ನನ್ನನ್ನು ಹಿಡಿದುಕೊಂಡಿದ್ದ ಆರೋಪಿಗಳು, ಕೊಠಡಿಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದರು. ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು’ ಎಂದೂ ಯುವತಿ ದೂರಿದ್ದಾರೆ.
‘ಊರಿಗೆ ಹೋಗಬೇಕು ಎಂದರೆ ಲಾಕ್ಡೌನ್ ಜಾರಿಯಾಯಿತು. ನಂತರ, ಭಯದಲ್ಲೇ ಕೆಲ ದಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದೆ. ನಮ್ಮೂರಿನ ವ್ಯಕ್ತಿಯೊಬ್ಬರ ಪರಿಚಯವಾಗಿ ಅವರಿಗೆ ವಿಷಯ ತಿಳಿಸಿದೆ. ಅವರ ಮೂಲಕವೇ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಯುವತಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.