ADVERTISEMENT

ಕಟ್ಟಿಗೇಹಳ್ಳಿಯಿಂದ ಸಾಗಿಸುತ್ತಿದ್ದ 360 ಕೆ.ಜಿ. ರಕ್ತಚಂದನ ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 21:45 IST
Last Updated 24 ಡಿಸೆಂಬರ್ 2022, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊಸಕೋಟೆ ಬಳಿಯ ಕಟ್ಟಿಗೇಹಳ್ಳಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 360 ಕೆ.ಜಿ ರಕ್ತಚಂದನ ತುಂಡುಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಜಪ್ತಿ ಮಾಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

‘ಕಟ್ಟಿಗೇಹಳ್ಳಿಯ ಏಜಾಜ್ ಷರೀಫ್ (44), ಸೈಯದ್ ಇಮ್ತಿಯಾಜ್ (36) ಹಾಗೂ ಶೌಕತ್ (30) ಬಂಧಿತರು. ಮೂವರು ಸೇರಿಕೊಂಡು ಡಿ. 22ರಂದು ಟಾಟಾ ಏಸ್‌ ವಾಹನದಲ್ಲಿ ರಕ್ತಚಂದನ ತುಂಡುಗಳನ್ನು ಸಾಗಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಸಂಪಿಗೆ ರಸ್ತೆಯ ಬಿಬಿಎಂಪಿ ಕಚೇರಿ ಎದುರು ಆರೋಪಿಗಳ ಟಾಟಾ ಏಸ್ ವಾಹನ ನಿಂತಿತ್ತು.ಈ ಬಗ್ಗೆ ಮಾಹಿತಿ ಬರುತ್ತಿ
ದ್ದಂತೆ ಸ್ಥಳಕ್ಕೆ ಹೋಗಿ ಪರಿಶಲಿಸಲಾಯಿತು. ರಕ್ತಚಂದನ ತುಂಡುಗಳ ಮೇಲೆ ಕಪ್ಪು ಬಣ್ಣದ ತಾಡಪತ್ರಿ ಮುಚ್ಚಿ ಸಾಗಿಸುತ್ತಿದ್ದ ಸಂಗತಿ ಪತ್ತೆಯಾಯಿತು. ಆರೋಪಿಗಳನ್ನು ವಿಚಾರಿಸಿದಾಗ, ಗ್ರಾಹಕರೊಬ್ಬರಿಗೆ ರಕ್ತಚಂದನ ತುಂಡುಗಳನ್ನು ನೀಡಲು ಹೊರಟಿದ್ದಾಗಿ ತಪ್ಪೊಪ್ಪಿಕೊಂಡರು’ ಎಂದು ತಿಳಿಸಿದರು.

ADVERTISEMENT

‘ಹೊರ ರಾಜ್ಯದಿಂದ ರಕ್ತಚಂದನವನ್ನು ಅಕ್ರಮವಾಗಿ ಸಾಗಿಸಿ ತಂದು ಕಟ್ಟಿಗೇಹಳ್ಳಿಯಲ್ಲಿ ಬಚ್ಚಿಡಲಾಗಿತ್ತು. ಕೆಲ ತುಂಡುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.