ADVERTISEMENT

ರೇಣುಕಸ್ವಾಮಿ ಕೊಲೆ ಕೇಸ್: ಕೃತ್ಯ ನಡೆದ ಸ್ಥಳ ಪರಿಶೀಲಿಸಿದ SPP ನೇತೃತ್ವದ ತಂಡ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 0:00 IST
Last Updated 17 ಡಿಸೆಂಬರ್ 2025, 0:00 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 57ನೇ ಎಸಿಎಂಎಂ ನ್ಯಾಯಾಲಯದಲ್ಲಿ ಬುಧವಾರದಿಂದ ಸಾಕ್ಷಿಗಳ ವಿಚಾರಣೆ ಆರಂಭ ಆಗಲಿದೆ.

ಸಾಕ್ಷಿಗಳ ವಿಚಾರಣೆಗೂ ಮುನ್ನ ಪ್ರಾಸಿಕ್ಯೂಷನ್‌ ಪರ ವಕೀಲರು ಹಾಗೂ ತನಿಖಾಧಿಕಾರಿಗಳು ಸಿದ್ಧತೆ ನಡೆಸಿದರು. ಕೃತ್ಯ ನಡೆದಿರುವ ವಿವಿಧ ಸ್ಥಳಕ್ಕೆ ಎಸ್‌ಪಿಪಿ ಪ್ರಸನ್ನಕುಮಾರ್, ಸಹಾಯಕ ಎಪಿಪಿ ಸಚಿನ್ ಹಾಗೂ ತನಿಖಾಧಿಕಾರಿ ಎಸಿಪಿ ಚಂದನ್ ಅವರು ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೇಣುಕಸ್ವಾಮಿ ಮೃತದೇಹ ಎಸೆದಿದ್ದ ರಾಜಕಾಲುವೆ ಬಳಿಯ ಸ್ಥಳ, ಹಲ್ಲೆ ನಡೆದಿದ್ದ ಪಟ್ಟಣಗೆರೆಯ ಶೆಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ಮೂಲಗಳು ಹೇಳಿವೆ.

ADVERTISEMENT

ವಿಚಾರಣೆ ವೇಳೆ ಹಾಜರಿರುವಂತೆ ಸೂಚಿಸಿ ರೇಣುಕಸ್ವಾಮಿ ಅವರ ತಂದೆ ಹಾಗೂ ತಾಯಿಗೆ (ಸಾಕ್ಷಿ ಸಂಖ್ಯೆ 7 ಹಾಗೂ 8) ನ್ಯಾಯಾಲಯವು ಡಿಸೆಂಬರ್‌ 4ರಂದು ಸಮನ್ಸ್ ಜಾರಿಗೊಳಿಸಿತ್ತು. ಬುಧವಾರ ನಡೆಯುವ ವಿಚಾರಣೆ ವೇಳೆ ಅವರು ಹಾಜರಾಗುವ ಸಾಧ್ಯತೆಯಿದೆ.

ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ಸಹಾಯಕ ಪ್ರಾಸಿಕ್ಯೂಟರ್(ಎಪಿಪಿ) ಸಚಿನ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪ್ರಮುಖ ಸಾಕ್ಷಿಗಳಾಗಿರುವ ರೇಣುಕಸ್ವಾಮಿ ಅವರ ತಂದೆ–ತಾಯಿಯನ್ನು ಪಾಟಿ ಸವಾಲಿಗೆ ಒಳಪಡಿಸಬೇಕಿದೆ ಎಂದು ಹಿಂದಿನ ವಿಚಾರಣೆ ವೇಳೆ ಸಚಿನ್‌ ಅವರು ನ್ಯಾಯಾಧೀಶರನ್ನು ಕೋರಿದ್ದರು. ಪವಿತ್ರಾಗೌಡ, ನಟ ದರ್ಶನ್‌ ಸೇರಿದಂತೆ ಇತರೆ ಆರೋಪಿಗಳ ಪರ ವಕೀಲರು ಆ ಮನವಿಗೆ ಆಕ್ಷೇಪಿಸಿದ್ದರು. ವಾದ–ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.