ಬೆಂಗಳೂರು: ‘102 ಹಿಂದುಳಿದ ಜಾತಿಗಳ ಪೈಕಿ ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನು ಒಂದೆರಡು ಬಲಿಷ್ಠ ಹಾಗೂ ದೊಡ್ಡ ಸಮುದಾಯದ ಜಾತಿಗಳು ಕಬಳಿಸುತ್ತಿವೆ. ಉಳಿದ ಕುಂಬಾರ, ಗಾಣಿಗ, ಸವಿತ, ತಿಗಳ, ದೇವಾಂಗ ಸೇರಿದಂತೆ 99 ಸಣ್ಣ ಜಾತಿಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಜಂಟಿ ಕ್ರಿಯಾ ವೇದಿಕೆಯ ಅಧ್ಯಕ್ಷ ಕೃಷ್ಣ ನಾಯಕ್ ದೂರಿದರು.
‘ಸರ್ಕಾರ ಮೊದಲು ಸಣ್ಣ ಜಾತಿಗಳಿಗೆ ಮೀಸಲಾತಿ ಕಲ್ಪಿಸಲು ಆದ್ಯತೆ ನೀಡಬೇಕು. ಈ ಕುರಿತು ಮಾ.6ರಂದು ವಿಚಾರ ಗೋಷ್ಠಿ ಆಯೋಜಿಸಿದ್ದು, ಇದರಲ್ಲಿ ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಪ್ರವರ್ಗ 2ಎ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ’ ಕುರಿತು ಈ ಗಾಂಧಿ ಭವನದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ದೇವಾಂಗ, ತಿಗಳ ಮತ್ತು ಮಡಿವಾಳ ಸಮಾಜದ ಮಠಾಧೀಶರು ಮತ್ತು ವಿವಿಧ ಸಮುದಾಯಗಳ ನಾಯಕರು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.
‘ಸಣ್ಣ ಜಾತಿಯವರನ್ನು ಸಮಾನವಾಗಿ ಕಂಡು ಅವರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರವರ್ಗ 2ಎ ಮೀಸಲಾತಿಯ ಸೌಲಭ್ಯಗಳು ದೊರಕಿಸಿಕೊಡಬೇಕು. ಆ ಮೂಲಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಮೇಲೆತ್ತಬೇಕು’ ಎಂದೂ ಅವರು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.