ADVERTISEMENT

ಪೊಲೀಸ್ ಕಮಿಷನರ್‌ಗೆ ‘ಕನ್ನಡ’ ಗೌರವ ವಂದನೆ: ಜನರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 16:21 IST
Last Updated 7 ಸೆಪ್ಟೆಂಬರ್ 2023, 16:21 IST
Venugopala K.
   Venugopala K.

ಬೆಂಗಳೂರು: ನಗರದ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರಿಗೆ ಕನ್ನಡದಲ್ಲಿ ಗೌರವ ವಂದನೆ ಸಲ್ಲಿಸಲಾಗಿದ್ದು, ಈ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಗೌರವ ವಂದನೆ ನೀಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ದಯಾನಂದ್, ‘ಕನ್ನಡದ ಮಾತು ಚಂದ ; ಕನ್ನಡದ ಕಮಾಂಡ್‌ಗಳು ಇನ್ನೂ ಚಂದ. ಏನಂತೀರಾ’ ಎಂದು ಬರೆದುಕೊಂಡಿದ್ದಾರೆ.

ಇದೇ ವಿಡಿಯೊಗೆ ಪ್ರತಿಕ್ರಿಯಿಸಿರುವ ಜನರು, ‘ಕನ್ನಡದಲ್ಲಿ ಗೌರವ ವಂದನೆ ಸಲ್ಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದಿದ್ದಾರೆ.

ADVERTISEMENT

ಬಾಡಿವೋರ್ನ್‌ ಕ್ಯಾಮೆರಾದಲ್ಲಿ ಸೆರೆ: ಕಮಿಷನರ್ ಬಿ. ದಯಾನಂದ್ ಅವರು ಹಲವು ದಿನಗಳಿಂದ ಬಾಡಿವೋರ್ನ್‌ ಕ್ಯಾಮೆರಾ ಧರಿಸುತ್ತಿದ್ದಾರೆ. ಇದೇ ಕ್ಯಾಮೆರಾದಲ್ಲಿ ಕನ್ನಡದ ಗೌರವ ವಂದನೆ ದೃಶ್ಯ ಸೆರೆಯಾಗಿದ್ದು, ಅದೇ ವಿಡಿಯೊವನ್ನು ಕಮಿಷನರ್ ಹಂಚಿಕೊಂಡಿದ್ದಾರೆ.

ಕಮಿಷನರ್ ಅವರು ಕಚೇರಿ ಎದುರು ಬಂದು ನಿಲ್ಲುತ್ತಿದ್ದಂತೆ, ‘ವಾಹನ ಪಡೆ ವಂದನಾ ಶಸ್ತ್ರ’ ಎಂದು ಕಮಾಂಡ್ ನೀಡುವ ಸಿಬ್ಬಂದಿ ಶಸ್ತ್ರಾಸ್ತ್ರಗಳನ್ನು ಶಿಸ್ತುಬದ್ಧವಾಗಿ ಮೇಲಕ್ಕೆ ಎತ್ತಿದ್ದರು. ನಂತರ, ‘ವಾಹನ ಪಡೆ ಕೆಳ ಶಸ್ತ್ರ’ ಎಂದು ಕಮಾಂಡ್ ನೀಡಿ ಶಸ್ತ್ರಾಸ್ತ್ರಗಳನ್ನು ಕೆಳಕ್ಕೆ ಇಳಿಸಿದ್ದರು.

‘ಮಾನ್ಯರೆ, ವಾಹನ ಪಡೆಯು ಪರಿವೀಕ್ಷಣೆಗೆ ಸಜ್ಜಾಗಿದೆ’ ಎನ್ನುವ ಮೂಲಕ ಸಿಬ್ಬಂದಿ ಕಮಿಷನರ್ ಅವರಿಗೆ ಸೆಲ್ಯೂಟ್ ಮಾಡಿ ಸ್ಥಳದಿಂದ ತೆರಳಿದರು. ಇದೇ ದೃಶ್ಯ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.