ಯಲಹಂಕ: 'ಸರ್ಕಾರ ಈಗಾಗಲೇ ಶಾಸಕರಿಗೆ ₹25 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರೂ ಹಣ ಮಾತ್ರ ಬಂದಿಲ್ಲ' ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಯಲಹಂಕದ ಕೆಂಪೇಗೌಡ ಮತ್ತು ಚೌಡೇಶ್ವರಿ ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ₹12 ಕೋಟಿ ವೆಚ್ಛದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ, ಮನೆಗಳಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
'ಕ್ಷೇತ್ರದಲ್ಲಿ ರಸ್ತೆಗಳ ಸಮಸ್ಯೆ ದೊಡ್ಡದಾಗಿದೆ. ಯಲಹಂಕದಲ್ಲಿ ಶೀಘ್ರವೇ ಗುಂಡಿ ಮುಚ್ಚುವ ಕಾರ್ಯ ಆರಂಭಿಸಲಾಗುವುದು. ಉದ್ಯಾನ ಮತ್ತು ಕೆರೆಗಳ ನಿರ್ವಹಣೆಗೆ ಹಣ ಮಂಜೂರಾಗದೇ ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರ ಅಗತ್ಯ ಅನುದಾನ ಮಂಜೂರು ಮಾಡಬೇಕು' ಎಂದು ಒತ್ತಾಯಿಸಿದರು.
'ಇಂತಹ ಸನ್ನಿವೇಶದ ನಡುವೆಯೂ ವಿವಿಧ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ಕ್ರಮ ವಹಿಸಿದ್ದೇನೆ' ಎಂದು ಹೇಳಿದರು.
ಬಿಬಿಎಂಪಿ ಮಾಜಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ, ಎಂ.ಮುನಿರಾಜು, ಬಿಜೆಪಿ ಮುಖಂಡರಾದ ಮುರಾರಿರಾಮು, ಈಶ್ವರ್, ವಿ.ಪವನ್ಕುಮಾರ್, ವಿ.ವಿ.ರಾಮಮೂರ್ತಿ, ಎ.ಎಸ್. ರಾಜ, ಈಶ್ವರಪ್ಪ, ಮುನಿಯಪ್ಪ, ಓಂ ರವೀಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.