ಬೆಂಗಳೂರು: ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಹಮದ್ ಇರ್ಫಾನ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಸುಲಿಗೆಗೆ ಯತ್ನಿಸಿದ್ದ ಮೂವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಂಪುರದ ಸರವಣ, ಮಂಜುನಾಥ ಹಾಗೂ ಪ್ರೇಮ್ಕಿರಣ್ ಬಂಧಿತರು. ಆರೋಪಿಗಳು ಡಿ.9ರ ರಾತ್ರಿ 12 ಗಂಟೆ ಸುಮಾರಿಗೆ ರಾಜಾಜಿನಗರದ ಮರಿಯಪ್ಪನಪಾಳ್ಯಕ್ಕೆ ಬಂದಿದ್ದರು. ಇದೇ ವೇಳೆ ಇರ್ಫಾನ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು.
ಸಮಯ ಕೇಳುವ ನೆಪದಲ್ಲಿ ಅವರ ಹತ್ತಿರ ಹೋಗಿದ್ದ ಆರೋಪಿಗಳು, ಏಕಾಏಕಿ ಮಚ್ಚು ತೆಗೆದು ಹಣ ಹಾಗೂ ಮೊಬೈಲ್ ಕೊಡುವಂತೆ ಬೆದರಿಸಿದ್ದರು. ಅವರು ಪ್ರತಿರೋಧ ತೋರಿದಾಗ ಕೈಗೆ ಮಚ್ಚಿನಿಂದ ಹೊಡೆದಿದ್ದರು. ಆಗ ಇರ್ಫಾನ್, ‘ಪೊಲೀಸ್.. ಪೊಲೀಸ್..’ ಎಂದು ಕೂಗಿಕೊಂಡಿದ್ದರಿಂದ ಮೂವರೂ ಓಡಿ ಹೋಗಿದ್ದರು.
ನಂತರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಇರ್ಫಾನ್, ಮರುದಿನ ಬೆಳಿಗ್ಗೆ ಠಾಣೆಗೆ ದೂರು ಕೊಟ್ಟಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಮದ್ಯ ಹಾಗೂ ಮಾದಕ ವ್ಯಸನಿಗಳಾದ ಆರೋಪಿಗಳು, ಖರ್ಚಿನ ಹಣಕ್ಕಾಗಿ ಸುಲಿಗೆಗೆ ಇಳಿದಿದ್ದರು. ರಾತ್ರಿಯಿಂದ ನಸುಕಿನವರೆಗೂ ವಿವಿಧ ರಸ್ತೆಗಳಲ್ಲಿ ಸುತ್ತಾಡಿ, ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ದೋಚುತ್ತಿದ್ದರು. ಈ ಗ್ಯಾಂಗ್ ವಿರುದ್ಧ ಬೊಮ್ಮನಹಳ್ಳಿ, ಮಾಗಡಿ ರಸ್ತೆ, ಶ್ರೀರಾಮಪುರ, ಸುಬ್ರಹ್ಮಣ್ಯನಗರ ಹಾಗೂ ರಾಜಾಜಿನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.