ಬೆಂಗಳೂರು: ಬೈಕ್ಗಳಲ್ಲಿ ಬಂದ ನಾಲ್ವರು ಮುಸುಕುಧಾರಿಗಳು, ಸುಲ್ತಾನ್ಪಾಳ್ಯ ಮುಖ್ಯರಸ್ತೆಯ ಮಾರುತಿ ಟಿಂಬರ್ ಯಾರ್ಡ್ ಬಳಿ ಆಟೊಗಾಗಿ ಕಾಯುತ್ತಿದ್ದ ಮೂವರು ಮಹಿಳೆಯರನ್ನು ಚಾಕುವಿನಿಂದ ಬೆದರಿಸಿ 28 ಗ್ರಾಂನ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾರೆ.
ಆರ್.ಟಿ.ನಗರ ಸಮೀಪದ ಮನೋರಾಯನಪಾಳ್ಯ ನಿವಾಸಿಯಾದ ಶಂಕರಿ, ಅನಾರೋಗ್ಯದಿಂದ ವೆಲ್ಲೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಯನ್ನು ನೋಡಿಕೊಂಡು ಬರಲು ದೊಡ್ಡಮ್ಮ ಯಶೋದಾ ಹಾಗೂ ಚಿಕ್ಕಮ್ಮ ಧಮಯಂತ್ರಿ ಜತೆ ವೆಲ್ಲೂರಿಗೆ ಹೊರಟಿದ್ದರು. ರೈಲು ನಿಲ್ದಾಣಕ್ಕೆ ತೆರಳಲು ಸುಲ್ತಾನ್ ಪಾಳ್ಯ ಮುಖ್ಯರಸ್ತೆಯಲ್ಲಿ ಆಟೊಗಾಗಿ ಕಾಯುತ್ತಿದ್ದಾಗ ಎರಡು ಬೈಕ್ಗಳಲ್ಲಿ ನಾಲ್ವರು ಅಲ್ಲಿಗೆ ಬಂದಿದ್ದಾರೆ.
ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋದವರೇ, ಚಾಕು ಹಿಡಿದು ಅವರನ್ನು ಸುತ್ತುವರಿದಿದ್ದಾರೆ. ಮೊದಲು ಧಮಯಂತ್ರಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡಿದ್ದಾರೆ. ಬಳಿಕ ಉಳಿದಿಬ್ಬರ ಕುತ್ತಿಗೆ ನೋಡಿದ್ದಾರೆ. ಅವರ ಬಳಿ ಚಿನ್ನ ಕಾಣದಿದ್ದಾಗ ಅಲ್ಲಿಂದ ಹೊರಟು ಹೋಗಿದ್ದಾರೆ. ಈ ಘಟನೆಯಿಂದ ಆಘಾತಕ್ಕೆ ಒಳಗಾದ ಮಹಿಳೆಯರು, ಬಳಿಕ ಆಟೊದಲ್ಲಿ ಹೆಬ್ಬಾಳ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ. ‘ಅವರೆಲ್ಲ ಉರ್ದು ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಒಬ್ಬಾತ ಮಾತ್ರ ನಮ್ಮ ಜೊತೆ ಕನ್ನಡದಲ್ಲಿ ಮಾತನಾಡಿದ. ಕೂಗಿದರೆ ಕುತ್ತಿಗೆ ಕುಯ್ದುಬಿಡುವುದಾಗಿ ಬೆದರಿಸಿದ. ಗಾಬರಿಯಲ್ಲಿ ಬೈಕ್ಗಳ ನೋಂದಣಿ ಸಂಖ್ಯೆಯನ್ನೂ ನೋಡಲಿಲ್ಲ’ ಎಂದು ಶಂಕರಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬ್ಯಾಂಕ್ ಉದ್ಯೋಗಿ ಎಂ.ಶಂಕರಿ ಎಂಬುವರು ಕೊಡಿಗೇಹಳ್ಳಿ ಠಾಣೆಗೆ ದೂರು ಕೊಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.