ಬೆಂಗಳೂರು: ನಗರದ ಮಾಲ್ಗಳು ಹಾಗೂ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುವ ಹಂಚಿಕೆದಾರ ರಾಕೇಶ್ ಪೊಕರನ್ (40) ಎಂಬುವರ ಬಳಿಯಿದ್ದ ₹45.50 ಲಕ್ಷ ಹಣವನ್ನು ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಫ್ರೇಜರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜೂನ್ 11ರಂದು ಸಂಜೆ ನಡೆದಿರುವ ಸುಲಿಗೆ ಸಂಬಂಧ ರಾಕೇಶ್ ದೂರು ನೀಡಿದ್ದಾರೆ. ಮೂವರು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಎಚ್ಬಿಆರ್ ಲೇಔಟ್ ನಿವಾಸಿ ರಾಕೇಶ್, ಐ.ಟಿ.ಸಿ ಸಿಗರೇಟ್ ಕಂಪನಿ ಹಂಚಿಕೆದಾರ. ಅವರ ಕಂಪನಿಯಲ್ಲಿ 100 ಜನ ಕೆಲಸಗಾರರು ಇದ್ದಾರೆ. ನಿತ್ಯವೂ ಮಾಲ್ ಹಾಗೂ ಅಂಗಡಿಗಳಿಗೆ ಸಿಗರೇಟ್ ತಲುಪಿಸುವ ಸೇಲ್ಸ್ಮನ್ಗಳು, ಅದರಿಂದ ಬಂದ ಹಣವನ್ನು ರಾಕೇಶ್ ಅವರಿಗೆ ತಂದು ಕೊಡುತ್ತಾರೆ. ಅವರು ಬ್ಯಾಂಕ್ಗೆ ಹೋಗಿ ಜಮೆ ಮಾಡುತ್ತಾರೆ.’
‘ಜೂನ್ 11ರಂದು ಸಂಗ್ರಹವಾಗಿದ್ದ ಹಣವನ್ನು ರಾಕೇಶ್ ಅವರು ಬಾಕ್ಸ್ನಲ್ಲಿ ಹಾಕಿಕೊಂಡು ಚಾಲಕ ಚಂದ್ರು ಜೊತೆಯಲ್ಲಿ ಕಾರಿನಲ್ಲಿ ಹೊರಟಿದ್ದರು. ಲಿಂಗರಾಜಪುರ ಬಳಿಯ ಫ್ರೇಜರ್ ಟೌನ್ ಕ್ಲಾರೆನ್ಸ್ ಶಾಲೆ ಮುಂಭಾಗದ ಪಾಟರಿ ರಸ್ತೆಯಲ್ಲಿ ಹಿಂದಿನಿಂದ ಬಂದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಚಾಲಕ ಚಂದ್ರು, ಕಾರು ನಿಲ್ಲಿಸದೇ ಮುಂದಕ್ಕೆ ಹೋಗಿದ್ದರು. ಆದರೆ, ಬೈಕ್ ಸವಾರ ಕಾರನ್ನು ಹಿಂಬಾಲಿಸಿಕೊಂಡು ಬಂದು ಮಾರ್ಗಮಧ್ಯೆಯೇ ಅಡ್ಡಗಟ್ಟಿದ್ದ’ ಎಂದು ಪೊಲೀಸರು ತಿಳಿಸಿದರು.
‘ಚಾಲಕ ಚಂದ್ರು ಕಾರಿನಿಂದ ಇಳಿದು ಸವಾರನ ಬಳಿ ಹೋಗಿ ವಿಚಾರಿಸುತ್ತಿದ್ದರು. ರಾಕೇಶ್ ಕಾರಿನಲ್ಲೇ ಇದ್ದರು. ಅದೇ ಸಂದರ್ಭದಲ್ಲೇಕಾರಿನ ಬಾಗಿಲು ಬಳಿ ಬಂದಿದ್ದ ಇಬ್ಬರು ಆರೋಪಿಗಳು, ಚಾಕು ತೋರಿಸಿ ರಾಕೇಶ್ ಅವರನ್ನು ಬೆದರಿಸಿದ್ದರು. ಹಣವಿದ್ದ ಬಾಕ್ಸ್ ತೆಗೆದುಕೊಂಡು ಪರಾರಿಯಾದರು. ಬೈಕ್ ಸವಾರ ಸಹ ಸ್ಥಳದಿಂದ ಹೊರಟು ಹೋದ. ಈ ಸಂಗತಿಯನ್ನು ರಾಕೇಶ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.