ಬೆಂಗಳೂರು: ರೋಟರಿ ಡಿಸ್ಟ್ರಿಕ್ಟ್ 3192 ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಲಿಜಬೆತ್ ಚೆರಿಯನ್ ಅವರು 2025–26ನೇ ಸಾಲಿಗೆ ರೋಟರಿ ಡಿಸ್ಟ್ರಿಕ್ಟ್ 3192ರ ಜಿಲ್ಲಾ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಜಿಲ್ಲಾ ಗವರ್ನರ್ ಮಹಾದೇವ ಪ್ರಸಾದ್ ಅವರು ಅಧಿಕಾರ ಹಸ್ತಾಂತರಿಸಿದರು. ಎಲಿಜಬೆತ್ ಚೆರಿಯನ್ ಅವರು ರೋಟರಿ ಕ್ಲಬ್ ಆಫ್ ಬೆಂಗಳೂರಿನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಎಲಿಜಬೆತ್ ಚೆರಿಯನ್, ‘ಸಾಮಾಜಿಕ ಸೇವೆಗಳನ್ನು ಮುಂದುವರಿಸುವ ಜತೆಗೆ, ಆರೋಗ್ಯ ತಪಾಸಣೆ ಶಿಬಿರಗಳನ್ನು ವಿವಿಧೆಡೆ ನಡೆಸಲಾಗುವುದು. ಗ್ರಾಮೀಣ ಭಾಗದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬಡ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವು ಒದಗಿಸುವಿಕೆ, ಗರ್ಭಕಂಠ ಕ್ಯಾನ್ಸರ್ ತಡೆಗೆ ಲಸಿಕೆ ನೀಡುವಂತಹ ಚಟುವಟಿಕೆಗಳನ್ನು ನಡೆಸಲಾಗುವುದು’ ಎಂದು ಹೇಳಿದರು.
‘ಕನ್ನಡವನ್ನು ನಾವು ಬಳಸಿ, ಬೆಳೆಸಬೇಕು. ಮನೆಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ಮಾತನಾಡುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
ರೋಟರಿ ಇಂಟರ್ನ್ಯಾಷನಲ್ ಮಾಜಿ ನಿರ್ದೇಶಕ ಮನೋಜ್ ದೇಸಾಯಿ, ‘ಸಮಾಜ ಸೇವೆಯನ್ನು ನಿಯಮಿತವಾಗಿ ಮಾಡಬೇಕು. ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ಮಾತಿಗೆ ಅನುಗುಣವಾಗಿ ಸಾಗಬೇಕು. ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದರು.
ರೋಟರಿ ಡಿಸ್ಟ್ರಿಕ್ಟ್ 3192ರ ಮಾಜಿ ಜಿಲ್ಲಾ ಗರ್ವನರ್ ಮಂಗರಾಜ್, ರೋಟರಿ ಇಂಟರ್ನ್ಯಾಷನಲ್ ನಿರ್ದೇಶಕ ಕೆ.ಪಿ. ನಾಗೇಶ್, ರೋಟರಿ ಕಾರ್ಯದರ್ಶಿಗಳಾದ ರೇಣುಕೇಶ್ವರ ಸ್ವಾಮಿ, ಜಗದೀಶ್ ಮುಗಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.