ಬೆಂಗಳೂರು: ಶ್ರೀರಾಮಸೇನೆ ಸಂಘಟನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ರೌಡಿಶೀಟರ್ ಯಶಸ್ವಿನಿ ಗೌಡ ಆಯ್ಕೆಯಾಗಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಯಶಸ್ವಿನಿ ಗೌಡ ಅವರನ್ನು ಸಂಘಟನೆಗೆ ಸೇರಿಸಿಕೊಂಡರು.
ಸುಲಿಗೆ, ಹಲ್ಲೆ, ಮೀಟರ್ ಬಡ್ಡಿ ದಂಧೆ ಸೇರಿದಂತೆ ಯಶಸ್ವಿನಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಸುಬ್ರಹ್ಮಣ್ಯಪುರ ಠಾಣೆಯ ರೌಡಿಗಳ ಪಟ್ಟಿಯಲ್ಲೂ ಅವರ ಹೆಸರಿದೆ. ಇಂಥ ಹಿನ್ನೆಲೆವುಳ್ಳವರಿಗೆ ಅಧಿಕಾರ ಕೊಟ್ಟಿರುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.
ಸುದ್ದಿಗಾರರ ಜತೆ ಮಾತನಾಡಿದ ಯಶಸ್ವಿನಿ, ‘ಶ್ರೀರಾಮಸೇನೆಯವರು ನನ್ನನ್ನು ಗುರುತಿಸಿ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುತ್ತೇನೆ. ರೌಡಿಗಳು ಸಮಾಜ ಸೇವೆ ಮಾಡಬಾರದು ಎಂದೇ
ನಿಲ್ಲವಲ್ಲ? ನನ್ನನ್ನು ನೂರು ಜನ ರೌಡಿ ಎಂದು ಕರೆಯಬಹುದು. ಆದರೆ, ಕೋರ್ಟ್ ಹಾಗೆ ಪರಿಗಣಿಸಿಲ್ಲವಲ್ಲ’ ಎಂದರು.
‘2010ರಲ್ಲಿ ಆರ್.ಟಿ.ನಗರ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಬಿ.ಪಿ.ಪ್ರಸಾದ್ ವಿರುದ್ಧ ಕರ್ತವ್ಯ ಲೋಪ ಆರೋಪದಡಿ ಕಮಿಷನರ್ಗೆ ದೂರು ಕೊಟ್ಟಿದ್ದೆ. ಆರೋಪ ಸಾಬೀತಾಗಿದ್ದರಿಂದ ಅವರನ್ನು ಕಮಿಷನರ್ ಅಮಾನತು ಮಾಡಿದ್ದರು. ಅಲ್ಲಿಯವರೆಗೆ ನನ್ನ ವಿರುದ್ಧ ಒಂದೇ ಒಂದು ಪ್ರಕರಣವೂ ಇರಲಿಲ್ಲ. ಆ ನಂತರ ಪ್ರಸಾದ್, ಕೆಲವರನ್ನು ಬಳಸಿಕೊಂಡು ನನ್ನ ವಿರುದ್ಧ ಸುಳ್ಳು ದೂರುಗಳನ್ನು ಕೊಡಿಸಿದರು. ಪರಿಚಿತ ಪೊಲೀಸರ ಮೂಲಕ ರೌಡಿಪಟ್ಟಿ ತೆರೆಸಿದರು.’
‘ನಾನು ಮೀಟರ್ ಬಡ್ಡಿ ದಂಧೆ ನಡೆಸಿಲ್ಲ. ಯಾವ ಮಹಿಳೆಗೂ ಹೊಡೆದಿಲ್ಲ. ಪ್ರಸಾದ್ ತೆರೆಮರೆಯಲ್ಲಿ ನಡೆಸಿದ ಕುತಂತ್ರಗಳು ಯಾರಿಗೂ ಗೊತ್ತಿಲ್ಲ. ನಾನು ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಗುರುತಿಸಿ ಅಮೆರಿಕ ವಿಶ್ವವಿದ್ಯಾಲಯ ಇತ್ತೀಚೆಗೆ ಡಾಕ್ಟರೇಟ್ ಗೌರವ ನೀಡಿದೆ. ಹಳೆ ದಿನಗಳನ್ನು ಮರೆತು ಹೊಸ ರೀತಿಯಲ್ಲಿ ಬದುಕುತ್ತಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.