ADVERTISEMENT

ಕಾರು ಅಟ್ಟಗಟ್ಟಿ ಹತ್ಯೆಗೈದ ರೌಡಿ ಗ್ಯಾಂಗ್

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 21:01 IST
Last Updated 9 ಡಿಸೆಂಬರ್ 2018, 21:01 IST

ಬೆಂಗಳೂರು: ಬ್ಯಾಟರಾಯನಪುರ ಸಮೀಪದ ಹೊಸಗುಡ್ಡದಹಳ್ಳಿಯಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಕಾರು ಚಾಲಕ ಜಬೀವುಲ್ಲಾ (34) ಅವರ ಮೇಲೆ ಮಚ್ಚು–ಲಾಂಗುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಕೋಳಿಫಾರಂ ಗೇಟ್ ನಿವಾಸಿಯಾದ ಜಬೀವುಲ್ಲಾ, ರಾತ್ರಿ 12 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಮೈಸೂರು ರಸ್ತೆಯ ಜನತಾ ಕಾಲೊನಿಗೆ ಬಂದಿದ್ದ. ಈ ವೇಳೆ ಅಲ್ಲೇ ಇದ್ದ ಜೆ.ಜೆ.ನಗರ ಠಾಣೆ ರೌಡಿಶೀಟರ್ ವಸೀಂ ಅಲಿಯಾಸ್ ವೋಡ್ಕ, ಕುಡಿದ ಮತ್ತಿನಲ್ಲಿ ಆತನ ಜತೆ ಜಗಳ ಪ್ರಾರಂಭಿಸಿದ್ದ.

ವಾಗ್ವಾದ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು. ಜಬೀವುಲ್ಲಾ ಹಾಗೂ ಸ್ನೇಹಿತರು ಅಲ್ಲಿಂದ ಹೊರಡುತ್ತಿದ್ದಂತೆಯೇ ಸ್ನೇಹಿತ ಮುಸ್ತಫಾ ಹಾಗೂ ಇನ್ನಿಬ್ಬರು ಸಹಚರರನ್ನು ಸ್ಥಳಕ್ಕೆ ಕರೆಸಿಕೊಂಡ ವಸೀಂ, ಬೈಕ್‌ಗಳಲ್ಲಿ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದ.

ADVERTISEMENT

ಹೊಸಗುಡ್ಡದಹಳ್ಳಿಯಲ್ಲಿ ಅವರು ಕಾರು ಅಡ್ಡಗಟ್ಟುತ್ತಿದ್ದಂತೆಯೇ, ಜಬೀವುಲ್ಲಾನ ಸ್ನೇಹಿತರು ಜೀವಭಯದಿಂದ ಓಡಿಹೋಗಿದ್ದಾರೆ. ಆ ನಂತರ ಹಂತಕರು ಜಬೀವುಲ್ಲಾನನ್ನು ವಾಹನದಿಂದ ಹೊರಗೆಳೆದು ಕೊಂದಿದ್ದಾರೆ. ಸ್ನೇಹಿತರು ಸ್ಥಳಕ್ಕೆ ವಾಪಸ್ ಬರುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

‘ಜಬೀವುಲ್ಲಾ ಕೂಡ ಅಪರಾಧ ಹಿನ್ನೆಲೆವುಳ್ಳವನು. 2016ರಲ್ಲಿ ಮಾಗಡಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಆತ, ಕೆಲ ದಿನಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದ. ಕುಡಿದ ಮತ್ತಿನಲ್ಲಿ ರಾತ್ರಿ ಜಗಳವಾಡಿಕೊಂಡಿದ್ದಾರೆ. ಹಂತಕರ ಪತ್ತೆಗೆ ಕೆಂಗೇರಿ ಎಸಿಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.