ಬೆಂಗಳೂರು: ನಿತ್ಯ ದೂಳು ಮಿಶ್ರಿತ ಗಾಳಿ ಸೇವನೆ, ಗುಂಡಿ ಬಿದ್ದ ರಸ್ತೆಗಳಲ್ಲೇ ಸಂಚರಿಸಿ ನರಕಯಾತನೆ ಅನುಭವಿಸಬೇಕಾಗಿದೆ ಎಂದು ನಾಗರೀಕರು ತಮ್ಮ ಅಳಲು ತೋಡಿಕೊಂಡರು.
ಮಾಗಡಿ ಮುಖ್ಯರಸ್ತೆಯಿಂದ ಸುಂಕದಕಟ್ಟೆ, ಸೊಲ್ಲಾಪುರದಮ್ಮ ದೇವಸ್ಥಾನ, ಮೋಹನ್ ಚಿತ್ರಮಂದಿರದವರೆರಿನ ರಸ್ತೆ ಪೂರ್ಣ ಕೆಟ್ಟಿದೆ. ರಸ್ತೆ ಬದಿಯ ಚರಂಡಿಯನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು, ಮತ್ತೊಂದೆಡೆ ಹಾಳಾಗಿ ರುವ ರಸ್ತೆಯನ್ನು ನಿರ್ವಹಣೆ ಮಾಡದೇ ಇರುವುದರಿಂದ ಸಣ್ಣ ಮಳೆಬಂದರೂ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು ಅಪಘಾತಕ್ಕೊಳಗಾದ ಘಟನೆಗಳೂ ನಡೆದಿವೆ.
ಸೊಲ್ಲಾಪುರದಮ್ಮ ದೇವಸ್ಥಾನ ದಿಂದ ಸುಂಕದಕಟ್ಟೆಯ ಶನಿಮಹಾತ್ಮ ದೇವಸ್ಥಾನದವರೆಗಿನ ರಸ್ತೆ ಅಕ್ಕಪಕ್ಕದಲ್ಲಿ ಮನೆ ನಿರ್ಮಿಸುತ್ತಿರುವವರು ಕಟ್ಟಡ ತ್ಯಾಜ್ಯಗಳನ್ನು ಚರಂಡಿಗೆ ಸುರಿಯುತ್ತಿದ್ದಾರೆ. ಹೀಗಾಗಿ ಚರಂಡಿ ಮುಚ್ಚಿಹೋಗಿದೆ. ಸೊಳ್ಳೆ ಉತ್ಪತ್ತಿಯಾಗಿ ಜನ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಬಿಬಿಎಂಪಿ ಬೃಹತ್ ರಸ್ತೆ ಕಾಮಗಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕೆಂಪೇಗೌಡ ಮಾತನಾಡಿ, ‘ರಸ್ತೆಯ ಇಕ್ಕೆಲಗಳ ಒತ್ತುವರಿಯಾಗಿದ್ದು ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗು ತ್ತಿಲ್ಲ. ಇತ್ತೀಚಿನ ಬಜೆಟ್ನಲ್ಲಿ ಕಾಮಗಾರಿ ನಿರ್ವಹಣೆಗೆ ಅಂದಾಜುಪಟ್ಟಿ ಸಿದ್ದಪಡಿಸಲಾಗಿದ್ದು ಆಯುಕ್ತರ ಪರಿಶೀಲನೆ ಹಾಗೂ ಅನುಮತಿಗಾಗಿ ಕಳುಹಿಸಿಕೊಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.