ಬೆಂಗಳೂರು: ಹೊಂಬೇಗೌಡ ನಗರ ವಾರ್ಡ್ನಲ್ಲಿಬನ್ನೇರುಘಟ್ಟ ರಸ್ತೆ ಬಳಿ ಒತ್ತುವರಿಯಾಗಿದ್ದ 10 ಎಕರೆ ಆಸ್ತಿಯನ್ನು ಬಿಬಿಎಂಪಿ ಮತ್ತೆ
ಸ್ವಾಧೀನಕ್ಕೆ ಪಡೆದಿದ್ದು, ಇದಕ್ಕೆ ಆಯುಕ್ತರ ಹೆಸರಿನಲ್ಲಿ ಖಾತೆ ಮಾಡಿಸಲಾಗಿದೆ.
ಭಾರಿ ಪ್ರಮಾಣದ ಆಸ್ತಿ ಒತ್ತುವರಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದರಿಂದ ಮೇಯರ್ ಎಂ.ಗೌತಮ್ ಕುಮಾರ್ ಅವರು ಉಪಮೇಯರ್ ರಾಮಮೋಹನ ರಾಜು, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ ಅಧಿಕಾರಿಗಳ ಜೊತೆ ಜೂನ್ನಲ್ಲಿ ಸ್ಥಳ ತಪಾಸಣೆ ನಡೆಸಿದ್ದರು. 10 ಎಕರೆಯಷ್ಟು ಜಾಗ ಒತ್ತುವರಿಯಾಗಿರುವುದು ದಾಖಲೆಗಳ ಪರಿಶೀಲನೆ ವೇಳೆ ದೃಢಪಟ್ಟಿತ್ತು. ಈ ಜಾಗವನ್ನು ತಕ್ಷಣವೇ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದ್ದರು.
‘ಒತ್ತುವರಿಯಾಗಿದ್ದ ಜಾಗವು ₹ 500 ಕೋಟಿ ಬೆಲೆಬಾಳುತ್ತದೆ. ಈ ಜಾಗಕ್ಕೆ ಸಂಬಂಧಿಸಿ ಪಾಲಿಕೆ ಆಯುಕ್ತರ ಹೆಸರಿನಲ್ಲಿ ಖಾತೆ ಮಾಡಿಸಲಾಗಿದೆ. ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಬಿಡಿಎ ಆಯುಕ್ತ ಎಚ್.ಆರ್.ಮಹದೇವ್, ಪಾಲಿಕೆ ವಿಶೇಷ ಆಯುಕ್ತ (ಆಸ್ತಿಗಳು) ಜಿ. ಮಂಜುನಾಥ್, ಉಪ ಆಯುಕ್ತರಾದ ಲಕ್ಷ್ಮೀದೇವಿ ಅವರ ಸಹಕಾರ ಸ್ಮರಣೀಯ’ ಎಂದು ಮೇಯರ್ ತಿಳಿಸಿದ್ದಾರೆ.
‘ಬಿಬಿಎಂಪಿ ಆಸ್ತಿಗಳು ಒತ್ತುವರಿ ಆಗಿರುವುದನ್ನು ಗುರುತಿಸಿ ಅವುಗಳನ್ನು ಹಂತ-ಹಂತವಾಗಿ ವಶಕ್ಕೆ ಪಡೆಯಲು ಕ್ರಮ ವಹಿಸಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.