ಬೆಂಗಳೂರು: ‘ಆದರ್ಶಗಳ ಹಿಂದೆ ಬಿದ್ದವರನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಸಮಾಜವಿಲ್ಲ.ಇದರಿಂದಾಗಿ ಗೌರವ ಸಂಪಾದಿಸಲು ಜನತೆ ಭ್ರಷ್ಟಾಚಾರದ ಹಾದಿ ಹಿಡಿದಿದ್ದು, ನಾವು ಎಂಜಲು ಪ್ರಜಾಪ್ರಭುತ್ವದಲ್ಲಿ ಜೀವಿಸುತ್ತಿದ್ದೇವೆ’ ಎಂದು ಹಿರಿಯ ರಾಜಕಾರಣಿ ಕೃಷ್ಣ ಅವರು ಬೇಸರ ವ್ಯಕ್ತಪಡಿಸಿದರು.
ಎಸ್.ಪಿ.ವರದರಾಜು ಆತ್ಮೀಯರ ಬಳಗ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಂಗಭೂಮಿ ಕಲಾವಿದೆ ಮಾಲತಿಶ್ರೀ ಮೈಸೂರು ಹಾಗೂ ನಟ ಹೊನ್ನವಳ್ಳಿ ಕೃಷ್ಣ ಅವರಿಗೆ ‘ಎಸ್.ಪಿ.ವರದರಾಜು ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿಯು ₹ 10 ಸಾವಿರ ನಗದು ಬಹುಮಾನ ಹೊಂದಿದೆ.
‘ಜಾತಿ, ಹಣದ ಮೋಹಕ್ಕೆ ಒಳಗಾಗಿ ನಮ್ಮತನವನ್ನು ಮಾರಿಕೊಳ್ಳುತ್ತಿದ್ದೇವೆ.ಆಧುನಿಕ ನಾಗರಿಕತೆ ನಮ್ಮನ್ನು ಭ್ರಷ್ಟರನ್ನಾಗಿ ಮಾಡಿದೆ. ಚುನಾವಣೆಗಳಲ್ಲಿ ಹರಿಯುವ ಹಣದ ಹೊಳೆ ಲೆಕ್ಕಕ್ಕೆ ಸಿಗದಂತಾಗಿದ್ದು, ರಾಜಕೀಯ ಮುಖಂಡರು ನೀಡುವ ನೂರಾರು ರೂಪಾಯಿಗಳಿಗೆಜನತೆ ಅಂಗಲಾಚುತ್ತಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ. ಇನ್ನೊಂದೆಡೆ, ಜಾಗತೀಕರಣವನ್ನು ಗಾಂಧೀಜಿ ವಿರೋಧಿಸಿದ್ದರು. ಇದೀಗ ಅದರ ಹೊಡೆತಕ್ಕೆ ಸಿಲುಕಿ, ನಲುಗಿ ಹೋಗಿದ್ದೇವೆ’ ಎಂದುಕೃಷ್ಣ ತಿಳಿಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ದೇಶದಲ್ಲಿ ಅತ್ಯಂತ ಪ್ರಬಲವಾಗಿರುವ ಸಾಮಾಜಿಕ ಸಂಸ್ಥೆ ಕುಟುಂಬ. ಆದರೆ, ಇದೀಗ ಅತ್ಯಂತ ವೇಗವಾಗಿ ಶಿಥಿಲಗೊಳ್ಳುತ್ತಿದೆ. ಈ ಎಲ್ಲದರ ನಡುವೆ ಡಾ.ರಾಜ್ ಕುಮಾರ್ ಕುಟುಂಬ ಕರ್ನಾಟಕ ಭೂಪಟದಲ್ಲಿ ಮಾದರಿಯಾಗಿ ಇಂದಿಗೂ ಬೆಳಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.