ADVERTISEMENT

‘ಐತಿಹಾಸಿಕ ಘಟನೆಗಳ ವಸ್ತುನಿಷ್ಠ ನಿರೂಪಣೆ’

‘ಸಂಘಜೀವಿಯ ಸಾಹಿತ್ಯ ಯಾನ’ದಲ್ಲಿ ಚಂದ್ರಶೇಖರ ಭಂಡಾರಿಯವರ ಸಾಹಿತ್ಯ ವಿಮರ್ಶೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 19:38 IST
Last Updated 12 ಜನವರಿ 2019, 19:38 IST
ಕಾರ್ಯಕ್ರಮದಲ್ಲಿ ಚಂದ್ರಶೇಖರ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ರಾಷ್ಟ್ರೋತ್ಥಾನ ಪರಿಷತ್‌ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ರಘುನಂದನ ಭಟ್ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಚಂದ್ರಶೇಖರ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ರಾಷ್ಟ್ರೋತ್ಥಾನ ಪರಿಷತ್‌ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ರಘುನಂದನ ಭಟ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:ಚಂದ್ರಶೇಖರ ಭಂಡಾರಿ ಅವರ ಬರಹಗಳಲ್ಲಿ ಸಂಶೋಧಕನ ಪರಿಶ್ರಮ, ಅನುಭವಗಳ ಮಿಶ್ರಣ ಕಾಣುತ್ತಿದೆ ಎಂದು ಮಿಥಿಕ್‌ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ಎನ್‌.ನಾಗರಾಜ ಬಣ್ಣಿಸಿದರು.

ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಶನಿವಾರ ಭಂಡಾರಿ ಅವರ ಸಾಹಿತ್ಯ ಕೃತಿಗಳ ವಿಮರ್ಶೆ ‘ಸಂಘಜೀವಿಯ ಸಾಹಿತ್ಯ ಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತಿಹಾಸದ ಘಟನೆಗಳನ್ನು ಕಥೆಯ ಶೈಲಿಯಲ್ಲಿ ಬರೆಯುವಾಗಲೂ ಅದರಲ್ಲಿ ಸತ್ಯಗಳಿರಬೇಕು; ವಸ್ತುನಿಷ್ಠವಾಗಿರಬೇಕು. ವಿಶ್ಲೇಷಣೆ ಇರಬೇಕು. ಇಲ್ಲಿ ಸಾಮಾನ್ಯ ಓದುಗನಿಗೆ ಬೇಕಾಗುವಂತೆ ಮನೋಜ್ಞವಾಗಿ ಚಿತ್ರಿಸಬೇಕು. ಆಳವಾದ ಅಧ್ಯಯನದ ಜತೆಗೆ ಸಮಾಜದಲ್ಲಿರುವ ಭಿನ್ನ ಮನಃಸ್ಥಿತಿಗಳ ಜನರನ್ನು ಅರ್ಥ ಮಾಡಿಕೊಳ್ಳಬೇಕು. ಭಂಡಾರಿಯವರಲ್ಲಿ ಇರುವ ಈ ಗುಣಗಳಿಂದ ಅವರ ಕೃತಿಯು ಜನರನ್ನು ಮುಟ್ಟುವಲ್ಲಿ ಯಶಸ್ವಿಯಾಗಿಸಿದೆ’ ಎಂದು ಹೇಳಿದರು.

ADVERTISEMENT

‘ಈ ಕೃತಿ ಇತಿಹಾಸದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಅಧ್ಯಯನಕಾರರಿಗೆ ಉಪಯುಕ್ತವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಇತಿಹಾಸವನ್ನು ಎರಡು ಪ್ರಕಾರಗಳಲ್ಲಿ ಬರೆಯಲಾಗುತ್ತದೆ. ಒಂದು ನೇರವಾಗಿ ಘಟನಾವಳಿಗಳನ್ನು ಬರೆಯುವುದು. ಇನ್ನೊಂದು ಕಥನಶೈಲಿಯಲ್ಲಿ ನಿರೂಪಿಸುತ್ತಾ ಹೋಗುವುದು. ಕಥನ ಶೈಲಿಯ ನಿರೂಪಣೆಯಲ್ಲಿ ವಸ್ತು ಸಂಗತಿಗಳಿಗೆ ಭಂಗ ಬರದಂತೆ ನಿರೂಪಿಸಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ವಿವಿ ಪ್ರಾಧ್ಯಾಪಕ ಹರ್ಷವರ್ಧನ ಶೀಲವಂತರ ಮಾತನಾಡಿ, ‘ವಸ್ತುಸ್ಥಿತಿಗೆ ಬದ್ಧವಾಗಿ ಯಾವುದೇ ಉತ್ಪ್ರೇಕ್ಷೆಗೂ ಹೋಗದೆ ಅನುವಾದ ಮಾಡುವುದು ಒಂದು ಸವಾಲು. ಭಾವಾರ್ಥಕ್ಕೆ ಗಂಟು ಬಿದ್ದವರು ಹೊಸದನ್ನೇ ಬರೆಯುವ ಸಾಧ್ಯತೆ ಇರುತ್ತದೆ. ಅನುವಾದಕನಿಗೆ ಈ ಎಚ್ಚರ ಇರಬೇಕು. ಆ ಎಚ್ಚರದಿಂದಲೇ ಭಂಡಾರಿಯವರು ಹಲವು ಕೃತಿಗಳನ್ನು ಅನುವಾದಿಸಿದ್ದಾರೆ’ ಎಂದರು.

‘ಸಂಘದ ಆರಂಭದ ದಿನಗಳಲ್ಲಿ ಮಂಗಳೂರು ಇದ್ದ ಬಗೆ, ಅಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ವಿವರಿಸಿದ್ದಾರೆ. ಒಂದು ಗತಿಶೀಲ ಸಮಾಜದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.ಸಂಘದ ಯಾವುದೇ ಕಾರ್ಯಕರ್ತ ಗೆದ್ದು ಬದುಕಬೇಕು ಎಂಬ ದೃಷ್ಟಿಕೋನವನ್ನು ತಮ್ಮ ಕೃತಿಯಲ್ಲಿ ನಿರೂಪಿಸಿದ್ದಾರೆ’ ಎಂದು ಅವರು ಹೇಳಿದರು.

*
ಭಂಡಾರಿಯವರ ಸಮಾಜ ಮುಖಿಯಾದ ಸಾಹಿತ್ಯ ಹೆಚ್ಚು ಆಪ್ತವಾಗುತ್ತದೆ. ಅವರ ವಿಚಾರ ಪ್ರಸರಣ ಕಾರ್ಯ ಅಭಿನಂದನೀಯ.
-ದತ್ತಾತ್ರೇಯ ಹೊಸಬಾಳೆ, ಆರ್‌ಎಸ್‌ಎಸ್, ಸಹಕಾರ್ಯವಾಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.