ADVERTISEMENT

ಬನ್ನೇರುಘಟ್ಟ ಉದ್ಯಾನ ಉಳಿಸಿ: ಟ್ವಿಟ್ಟರ್‌ನಲ್ಲಿ ಮೊಳಗಿದ ಕೂಗು

ಕರ್ಫ್ಯೂ ವೇಳೆ ಸರ್ಕಾರದ ಕಿವಿ ಹಿಂಡಿದರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 3:21 IST
Last Updated 23 ಮಾರ್ಚ್ 2020, 3:21 IST

ಬೆಂ‌ಗಳೂರು: ಜನತಾ ಕರ್ಫ್ಯೂ ವೇಳೆ ಹೆಚ್ಚಿನವರು ಮನೆಯಲ್ಲಿ ಕಾಲ ಕಳೆಯಲು ಚಡಪಡಿಸುತ್ತಿದ್ದರೆ, ಪರಿಸರ ಪ್ರೇಮಿಗಳು ಈ ಸಮಯವನ್ನು ಸದುದ್ದೇಶಕ್ಕೆ ಬಳಸಿಕೊಂಡರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯವನ್ನು (ಇಎಸ್‌ಜೆಡ್‌) 100 ಚದರ ಕಿ.ಮೀ.ಗಳಷ್ಟು ಕಡಿತ ಮಾಡಿರುವ ನಿರ್ಧಾರ ಹಿಂಪಡೆಯಿರಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ತಮ್ಮ ಪ್ರತಿಭಟನೆ ದಾಖಲಿಸಲು ಹಾಗೂ ಹಕ್ಕೊತ್ತಾಯ ಮಂಡಿಸಲು ಅವರು ಬಳಸಿಕೊಂಡಿದ್ದು ಟ್ವಿಟರ್‌ ಸಾಮಾಜಿಕ ಜಾಲತಾಣವನ್ನು. ವೃಕ್ಷಾ ಪ್ರತಿಷ್ಠಾನ ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನದ ಆಶ್ರಯದಲ್ಲಿ ಪರಿಸರ ಕಾರ್ಯಕರ್ತರು ಹಮ್ಮಿಕೊಂಡಿದ್ದ ಈ ಟ್ವೀಟ್‌ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರಲ್ಲಿ 3 ಸಾವಿರಕ್ಕೂ ಅಧಿಕ ಟ್ವೀಟ್‌ಗಳು ಹರಿದಾಡಿದವು.

‘ಇಎಸ್‌ಜೆಡ್‌ ಪ್ರಮಾಣವನ್ನು 100 ಚ.ಕಿ.ಮೀಗಳಷ್ಟು ಕಡಿಮೆ ಮಾಡುವುದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅವನತಿಗೆ ಕಾರಣವಾಗಲಿದೆ. ಪರಿಸರ ಉಳಿಸಿಕೊಳ್ಳದಿದ್ದರೆ ಕೊರೊನಾಕ್ಕಿಂತಲೂ ಭೀಕರ ವೈರಸ್‌ಗಳು ಹುಟ್ಟಿಕೊಳ್ಳಬಲ್ಲವು. ಬೆಂಗಳೂರಿನ ಪಾಲಿನ ಶ್ವಾಸಕೋಶದಂತಿರುವ ಈ ರಾಷ್ಟ್ರೀಯ ಉದ್ಯಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಸ್ಥಾಪಿತ ಹಿತಾಸಕ್ತಿಗಳ ಒತ್ತಡಕ್ಕೆ ಮಣಿಯಬಾರದು’ ಎಂದು ಪರಿಸರ ಕಾರ್ಯಕರ್ತರು ಒತ್ತಾಯಿ ಸಿದರು.

ADVERTISEMENT

‘ಈ ಅಭಿಯಾನಕ್ಕೆ ಜನ ಬೆಂಬಲ ಸಿಕ್ಕಿದೆ. ಸರ್ಕಾರ ತನ್ನ ನಿರ್ಧಾರವನ್ನು ಇನ್ನಾದರೂ ಮರುಪರಿಶೀಲಿಸಬೇಕು’ ಎಂದು ವೃಕ್ಷಾ ಪ್ರತಿಷ್ಠಾನದ ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇಎಸ್‌ಜೆಡ್‌ ಕಡಿತ ಮಾಡಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಇತ್ತೀಚೆಗೆ ಆದೇಶ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.