ಬೆಂಗಳೂರು: ಕೊರೊನಾ ಪರಿಸ್ಥಿತಿಯಲ್ಲಿ ಶಾಲಾರಂಭ ಮತ್ತು ಸಮುದಾಯದ ಸಹಕಾರ ಕುರಿತಂತೆ ಸಲಹೆ, ಸೂಚನೆಗಳನ್ನು ನೀಡುವಂತೆ ಎಲ್ಲ ಸಚಿವರು ಮತ್ತು ಶಾಸಕರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಶಾಲೆಗಳನ್ನು (ಎಲ್ಕೆಜಿಯಿಂದ ಪಿಯುಸಿವರೆಗೆ) ಯಾವಾಗ ಆರಂಭಿಸಬಹುದು, ಒಂದು ವೇಳೆ ಆರಂಭಿಸುವುದಾದರೆ ಯಾವ ತರಗತಿಗಳನ್ನು ಮೊದಲು ಆರಂಭಿಸಬಹುದು, ಸಮುದಾಯ ಹಾಗೂ ಜನಪ್ರತಿನಿಧಿಗಳಿಂದ ಶಿಕ್ಷಣ ಇಲಾಖೆ ಯಾವ ರೀತಿಯಿಂದ ಸಹಕಾರ ನಿರೀಕ್ಷಿಸಬಹುದು’ ಎಂಬ ಬಗ್ಗೆ ಸಲಹೆ, ಸೂಚನೆಯನ್ನು ನೀಡುವಂತೆ ಪತ್ರದಲ್ಲಿ ಅವರು ಕೋರಿದ್ದಾರೆ.
‘ಕೊರೊನಾ ಕಾರಣದಿಂದ ಮಾರ್ಚ್ನಲ್ಲಿ ಮುಚ್ಚಿದ ಶಾಲೆಗಳನ್ನು ಇನ್ನೂ ತೆರೆಯಲಾಗುತ್ತಿಲ್ಲ. ಜೂನ್ನಲ್ಲಿ ಆರಂಭವಾಗಬೇಕಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ಚಟುವಟಿಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಶಾಲೆಗಳನ್ನು ಮತ್ತೆ ಆರಂಭಿಸಲು ಪೂರ್ವಸಿದ್ಧತೆ, ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್ಒಪಿ) ಇಲಾಖೆ ಸಿದ್ಧಪಡಿಸಿಕೊಂಡಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಕೊರೊನಾ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಸಾಗಿದೆ. ಈ ಪರಿಸ್ಥಿತಿಯ ನಡುವೆಯೇ ಸಾಮಾಜಿಕ ಜೀವನ ತಹಬಂದಿಗೆ ಮರಳಬೇಕಿದೆ. ಕೊರೊನಾ ಕಾರಣಕ್ಕಾಗಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವುದು ಶಿಕ್ಷಣ ಕ್ಷೇತ್ರವಾಗಿದೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.