ಬೆಂಗಳೂರು: ‘ಚಿಕ್ಕಂದಿನಿಂದ ಸದಾ ಪ್ರಶ್ನಿಸುವ ಕುತೂಹಲ ಬೆಳೆಸಿಕೊಳ್ಳುವುದರಿಂದ ಭವಿಷ್ಯದಲ್ಲಿ ದೊಡ್ಡ ಸಾಧನೆಗಳನ್ನು ಮಾಡಬಹುದು ಹಾಗೂ ಹೊಸ ಆವಿಷ್ಕಾರಗಳನ್ನು ಹೊರತರಬಹುದು’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನಿಕಟಪೂರ್ವ ಅಧ್ಯಕ್ಷ ಪ್ರೊ. ಎ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪದವಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾನ್ಯವಾಗಿ ಮನೆಗಳಲ್ಲಿ ಮಕ್ಕಳು ಕುತೂಹಲದಿಂದ ಕೇಳುವ ಪ್ರಶ್ನೆಗಳಿಗೆ ಹಿರಿಯರ ಬಳಿ ಉತ್ತರ ಇರುವುದಿಲ್ಲ. ಆಗ ತಮ್ಮ ನ್ಯೂನತೆ ಮುಚ್ಚಿಕೊಳ್ಳಲು ತಲೆಹರಟೆ ಎಂದು ಗದರಿಸಿ, ಬಾಯಿ ಮುಚ್ಚಿಸುತ್ತಾರೆ. ಅಷ್ಟಕ್ಕೇ ಪ್ರಶ್ನಿಸುವ ಕುತೂಹಲ ನಿಲ್ಲಬಾರದು. ಆ ಗುಣವೇ ನಿಮ್ಮನ್ನು ಭವಿಷ್ಯದ ಸಾಧಕರನ್ನಾಗಿ ಮಾಡುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಎನ್.ನರಸಿಂಹಮೂರ್ತಿ,‘ವಿಜ್ಞಾನ ಬೆಳೆದಂತೆ ಪ್ರಪಂಚದ ಆಗುಹೋಗುಗಳಿಗೆ ಉತ್ತರ ಸಿಗುತ್ತದೆ. ದೇಶದಲ್ಲಿ ಹಸಿವು ಮತ್ತು ಬಡತನ ಹೋಗಲಾಡಿಸುವ ವಿಜ್ಞಾನ ಅಭಿವೃದ್ಧಿಯಾಗಬೇಕು‘ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.