ADVERTISEMENT

ಗುಜರಿ ಕೇಂದ್ರ ಶೀಘ್ರವೇ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 19:48 IST
Last Updated 1 ಫೆಬ್ರುವರಿ 2023, 19:48 IST

ಬೆಂಗಳೂರು: ನೋಂದಾಯಿತ ವಾಹನಗುಜರಿ ಕೇಂದ್ರಗಳನ್ನು (ಆರ್‌ವಿಎಸ್‌ಎಫ್‌) ತೆರೆಯಲು ಸಾರಿಗೆ ಇಲಾಖೆ ತಯಾರಿ ನಡೆಸುತ್ತಿದ್ದು, ಮೂರು ತಿಂಗಳಲ್ಲಿ ಗುಜರಿ ಕೇಂದ್ರಗಳು ಅಸ್ತಿತ್ವಕ್ಕೆ ಬರಲಿವೆ.

ಗುಜರಿ ಕೇಂದ್ರ ತೆರೆಯಲು ಆಸಕ್ತರಿಂದ ಸಾರಿಗೆ ಇಲಾಖೆ ಇನ್ನೆರಡು ದಿನಗಳಲ್ಲಿ ‌ಅರ್ಜಿ ಸ್ವೀಕರಿಸಲಿದ್ದು, ₹10 ಕೋಟಿಗೂ ಹೆಚ್ಚು ವಹಿವಾಟು ನಡೆಸಿರುವ ಕಂಪನಿ ಅಥವಾ ವ್ಯಕ್ತಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಗುಜರಿಗೆ ಬರುವ ವಾಹನಗಳನ್ನು ನಿಲ್ಲಿಸಲು ಅಗತ್ಯ ಜಾಗ ಇರಬೇಕಾಗುತ್ತದೆ. ಜಾಗ ಸಿದ್ಧ ಇದ್ದವರು ಅರ್ಜಿ ಸಲ್ಲಿಸಬಹುದು .

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಒಪ್ಪಿಗೆ ಪತ್ರ, ಕಾರ್ಮಿಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯ
ಬೇಕು. ಗುಜರಿ ಕೇಂದ್ರಕ್ಕೆ ಬೇಕಿರುವ ಯಂತ್ರಗಳನ್ನು ಅಳವಡಿಕೆ ಮಾಡಿ
ಕೊಂಡ ಬಳಿಕ ಸಾರಿಗೆ ಇಲಾಖೆಯಿಂದ ಪರವಾನಗಿ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ.ಮಲ್ಲಿಕಾರ್ಜುನ್ ತಿಳಿಸಿದರು.

ADVERTISEMENT

‘15 ವರ್ಷ ಮೀರಿದ ವಾಹನ
ಗಳನ್ನೆಲ್ಲಾ ಗುಜರಿಗೆ ಹಾಕಬೇಕೆಂದಿಲ್ಲ. ಸ್ವಯಂ ಪ್ರೇರಿತವಾಗಿ ಬಂದವರು ನೇರವಾಗಿ ಗುಜರಿ ಕೇಂದ್ರಕ್ಕೆ ವಾಹನಗಳನ್ನು ಕೊಂಡೊಯ್ಯಬೇಕು. ಆ ಕೇಂದ್ರದವರೇ ಆನ್‌ಲೈನ್‌ನಲ್ಲಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಎನ್‌ಒಸಿ (ನಿರಾಕ್ಷೇಪಣ ಪತ್ರ) ಪಡೆದುಕೊಳ್ಳುತ್ತಾರೆ. ಪೊಲೀಸ್ ಅಥವಾ ಸಾರಿಗೆ ಇಲಾಖೆಗೆ ವಾಹನಗಳ ಮಾಲೀಕರು ಅರ್ಜಿ ಸಲ್ಲಿಸಬೇಕಿಲ್ಲ’ ಎಂದರು.

‘ವಾಹನದಲ್ಲಿನ ಕಬ್ಬಿಣದ ತೂಕ ಆಧರಿಸಿ ಬೆಲೆ ನಿಗದಿ ಮಾಡಲಾಗುತ್ತದೆ. ಅದರ ಮೊತ್ತ ನೇರವಾಗಿ ವಾಹನ ಮಾಲೀಕರ ಖಾತೆಗೆ ಜಮೆಯಾಗಲಿದೆ. ಅಲ್ಲಿಂದ ಪ್ರಮಾಣ ಪತ್ರ ಪಡೆದು ಹೊಸ ವಾಹನ ಖರೀದಿ ಮಾಡುವಾಗ ರಿಯಾಯಿತಿ ಪಡೆಯಬಹುದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.