ADVERTISEMENT

ಚರಂಡಿ ಕಾಮಗಾರಿ: ಮರ ಬಿದ್ದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 20:57 IST
Last Updated 22 ಜೂನ್ 2022, 20:57 IST
   

ಬೆಂಗಳೂರು: ಐಐಎಸ್‌ಸಿ ಕಾಂಪೌಂಡ್ ಪಕ್ಕದಲ್ಲಿದ್ದ ಮರ ಬಿದ್ದು ಚರಂಡಿ ನಿರ್ವಹಣೆ ಕಾಮಗಾರಿಯ ಉಪ ಗುತ್ತಿಗೆ ವಹಿಸಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.

ಆನೇಕಲ್‌ ಬಳಿಯ ಕಾಚಮಾರನಹಳ್ಳಿ ಗ್ರಾಮದ ವಸಂತಕುಮಾರ್‌ (33) ಮೃತ ವ್ಯಕ್ತಿ. ಬೆಳಗಿನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಬಿಬಿಎಂಪಿಯಿಂದ ಚರಂಡಿ ‌ನಿರ್ವಹಣೆಯ ಗುತ್ತಿಗೆಯನ್ನು ಪಡೆದಿದ್ದ ಕಂಪನಿಯಿಂದ ವಸಂತಕುಮಾರ್‌ ಅವರು ಉಪ ಗುತ್ತಿಗೆ ಪ‍ಡೆದು ಕೆಲಸ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಐಎಸ್‌ಸಿ ಆವರಣಕ್ಕೆ ಹೊಂದಿಕೊಂಡಿದ್ದ ಚರಂಡಿಯನ್ನು ಜೆಸಿಬಿ ಸಹಾಯದಿಂದ ವಸಂತಕುಮಾರ್ ಮತ್ತು ಅವರ ಸಹೋದರ ನಾಗೇಶ್‌ ಸ್ವಚ್ಛಗೊಳಿಸುತ್ತಿದ್ದ ವೇಳೆ ಬೃಹದಾಕಾರದ ಮರ ಬುಡ ಸಮೇತ ಉರುಳಿ ಬಿದ್ದಿದೆ. ಕಾಂಪೌಂಡ್ ಮೇಲೆ ಬಿದ್ದ ಮರದಡಿಯಲ್ಲಿ ಸಿಲುಕಿ ವಸಂತಕುಮಾರ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ADVERTISEMENT

ಈ ರಸ್ತೆಯಲ್ಲಿ ಹಗಲಿನ ವೇಳೆ ವಾಹನ ಸಂಚಾರ ದಟ್ಟಣೆ ಇರುವ ಕಾರಣಕ್ಕೆ ರಾತ್ರಿ ವೇಳೆ ಕಾಮಗಾರಿ ನಡೆಯುತ್ತಿತ್ತು. ಮಾಹಿತಿ ಸಿಕ್ಕಿದ ತಕ್ಷಣ ಯಶವಂತಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೆ, ಯಶವಂತಪುರ ಮತ್ತು ರಾಜಾಜಿನಗರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳು ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸಿದ್ದವು.

ಪಾಲಿಕೆಯಿಂದ ಪರಿಹಾರ ನೀಡಲು ಅವಕಾಶ ಇಲ್ಲ: ‘ಮರ ಬಿದ್ದಿರುವ ಘಟನೆ ಆಕಸ್ಮಿಕ ಆಗಿರುವುದರಿಂದ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲು ಆಗುವುದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

‘ದುರಂತದ ಬಗ್ಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಐಎಸ್‌ಸಿ ಆವರಣದಲ್ಲಿ ಕಾಂಪೌಂಡ್ ಪಕ್ಕದಲ್ಲಿ ಇದ್ದ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಾಂಪೌಂಡ್‌ ಬಿದ್ದಿದೆ. ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ
ವನ್ನು ಪಾಲಿಕೆಯಿಂದ ನೀಡಲು ಅವಕಾಶ ಇಲ್ಲ. ಐಐಎಸ್‌ಸಿ ಆವರಣದಲ್ಲಿದ್ದ ಮರ ಬಿದ್ದಿರುವುದರಿಂದ ಪರಿಹಾರ ನೀಡಲು ಅವರಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.