ಬೆಂಗಳೂರು: ಕೆಲಸ ಕೊಡಿಸುವುದಾಗಿ ಹೇಳಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಕಿಶೋರ್ ಅಲಿಯಾಸ್ ಮಂಜುನಾಥ್ (32) ಎಂಬಾತನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.
ಹನುಮಂತನಗರದ ನಿವಾಸಿಯಾದ ಮಂಜುನಾಥ್, ಆಹಾರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳೂರಿನ 22 ವರ್ಷದ ಯುವತಿ ಆತನ ವಿರುದ್ಧ ದೂರು ಕೊಟ್ಟಿದ್ದಳು ಎಂದು ಪೊಲೀಸರು ಹೇಳಿದರು.
‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಯುವತಿ, ಜಾಲತಾಣದಲ್ಲಿ ರೆಸ್ಯುಮೆ ಅಪ್ಲೋಡ್ ಮಾಡಿದ್ದಳು. ಅದರಲ್ಲಿದ್ದ ಮಾಹಿತಿ ತಿಳಿದುಕೊಂಡ ಆರೋಪಿ, ಯುವತಿಗೆ ಕರೆ ಮಾಡಿದ್ದ. ಇನ್ಫೊಸಿಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡಿದ್ದ’.
‘ಆತನ ಮಾತು ನಂಬಿದ್ದ ಯುವತಿ, ಕೆಲಸ ಕೊಡಿಸಬಹುದೆಂಬ ಭರವಸೆ ಇಟ್ಟುಕೊಂಡಿದ್ದಳು. ಆದರೆ, ಆರೋಪಿ ಯುವತಿಯ ಮೊಬೈಲ್ಗೆ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಹಣಕ್ಕೂ ಬೇಡಿಕೆ ಇಟ್ಟಿದ್ದ’ ಎಂದು ಪೊಲೀಸರು ತಿಳಿಸಿದರು. ‘ಆರೋಪಿ, ಇದುವರೆಗೂ ಐವರು ಮಹಿಳೆಯರಿಗೆ ವಂಚಿಸಿರುವ ಮಾಹಿತಿ ಇದೆ. ಆ ಮಹಿಳೆಯರ ಹೇಳಿಕೆ ಪಡೆಯಬೇಕಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.