ADVERTISEMENT

ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 19:51 IST
Last Updated 19 ಜನವರಿ 2022, 19:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ದೂರು ನೀಡಲು ಹೋದಾಗ ಹೆಣ್ಣೂರು ಠಾಣೆಯ ಇನ್‌ಸ್ಪೆಕ್ಟರ್‌ ವಸಂತ್‌ಕುಮಾರ್‌ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ದೂರು ನೀಡಿದ್ದಾರೆ.

‘ಮನೆಯಲ್ಲಿ ಭೋಗ್ಯಕ್ಕೆ ಇದ್ದವರು ತನ್ನ ಮೇಲೆ ಹಲ್ಲೆ ನಡೆಸಿದ್ದರ ಕುರಿತು ದೂರು ನೀಡಲು ಹೋದಾಗ ಇನ್‌ಸ್ಪೆಕ್ಟರ್‌ ಅಸಭ್ಯವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಮನವಿ ಮಾಡಿದ್ದಾರೆ.

‘ಇನ್‌ಸ್ಪೆಕ್ಟರ್‌ ವಸಂತ್‌, ಪ್ರತಿವಾದಿಗಳಿಗೆ ಕುಮ್ಮಕ್ಕು ನೀಡಿ ನನ್ನ ಮೇಲೆ ಪ್ರತಿದೂರು ದಾಖಲಿಸುವಂತೆ ಮಾಡಿದ್ದರು. ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿದ್ದರು. ಜಾಮೀನು ಪಡೆದಿದ್ದರೂ ನನ್ನನ್ನು ಪದೇ ಪದೇ ಠಾಣೆಗೆ ಕರೆಯುತ್ತಿದ್ದರು. ಕೊಠಡಿಗೆ ಕರೆದು ಕೈ ಹಿಡಿದು ಎಳೆದಾಡಿದ್ದರು. ನೀನು ನನಗೆ ಬೇಕೇ ಬೇಕು. ಕರೆದಲ್ಲೆಲ್ಲಾ ಬರಬೇಕು ಎಂದು ಪೀಡಿಸುತ್ತಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.

ADVERTISEMENT

‘ಶಕ್ತಿನಗರದಲ್ಲಿ ಸ್ವಂತ ಮನೆ ಹೊಂದಿದ್ದೇನೆ. ಕೆಲವು ವರ್ಷಗಳ ಹಿಂದೆ ಅದನ್ನು ವರಲಕ್ಷ್ಮಿ ಎಂಬುವರಿಗೆ ಭೋಗ್ಯಕ್ಕೆ ನೀಡಿದ್ದೆ. ಅದಕ್ಕಾಗಿ ₹7 ಲಕ್ಷ ಪಡೆದಿದ್ದೆ. ವರಲಕ್ಷ್ಮಿ ಅವರ ಕುಟುಂಬದವರು ಒಂದು ವರ್ಷದಿಂದ ನೀರಿನ ಬಿಲ್‌ ಪಾವತಿಸಿಲ್ಲ. ಅದನ್ನು ಪ್ರಶ್ನಿಸಲು ಇದೇ 13ರಂದು ಮನೆಗೆ ಹೋಗಿದ್ದಾಗ ಅವರೆಲ್ಲಾ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಚಾಕುವಿನಿಂದ ಇರಿದಿದ್ದರು. ಅವರಿಂದ ತಪ್ಪಿಸಿಕೊಂಡು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ. ಬಳಿಕ ಹೆಣ್ಣೂರು ಠಾಣೆಗೆ ದೂರು ನೀಡಲು ಹೋಗಿದ್ದೆ. ಇನ್‌ಸ್ಪೆಕ್ಟರ್‌ ವಸಂತ್‌ ದೂರು ದಾಖಲಿಸಿಕೊಳ್ಳದೆ ನನ್ನನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.