ADVERTISEMENT

ಶನಿ ದೇವಾಲಯ ತೆರವು ಕೋರಿದ ಅರ್ಜಿ ವಿಚಾರಣೆ ಮುಂದಕ್ಕೆ

ಕಾರಿಡಾರ್ ಯೋಜನೆ ಅಭಿವೃದ್ಧಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 20:03 IST
Last Updated 5 ಡಿಸೆಂಬರ್ 2018, 20:03 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮೆಜೆಸ್ಟಿಕ್ ಸಮೀಪದ ಓಕಳಿಪುರಂ ಜಂಕ್ಷನ್‌ನಲ್ಲಿ ಕೈಗೊಂಡಿರುವ ಎಂಟು ಪಥದ ಕಾರಿಡಾರ್ ಯೋಜನೆ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿರುವ ಶನಿಮಹಾತ್ಮ ದೇವಾಲಯ ತೆರವು ಕುರಿತು ಸಮರ್ಪಕ ಉತ್ತರ ನೀಡಿ’ ಎಂದು ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರೈಲ್ವೆ ಇಲಾಖೆಗೆ ಸೂಚಿಸಿದೆ.

ಈ ಕುರಿತಂತೆ ಮತ್ತೀಕೆರೆಯ ಕೆ.ಎಸ್.ಸುಬ್ರಮಣ್ಯನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಎಸ್.ಬಸವರಾಜ್‌ ವಾದ ಮಂಡಿಸಿ, ‘ಓಕಳಿಪುರಂ ಜಂಕ್ಷನ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ರೈಲ್ವೆ ಸಚಿವಾಲಯ ಹಾಗೂ ಪಾಲಿಕೆ ಸುಮಾರು ₹ 200 ಕೋಟಿ ವೆಚ್ಚದಲ್ಲಿ ಜಂಟಿಯಾಗಿ ಕಾರಿಡಾರ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿವೆ. ಆದರೆ, ಈ ಕಾಮಗಾರಿಗೆ ಶನಿ ದೇವಾಲಯ ಅಡ್ಡಿಯಾಗಿದೆ. ಇದನ್ನು ತೆರವುಗೊಳಿಸಲು ಕೆಲವು ಪ್ರಭಾವಿ ಶಕ್ತಿಗಳು ಅಡ್ಡಿಯುಂಟು ಮಾಡುತ್ತಿವೆ’ ಎಂದು ಆರೋಪಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ದೇಗುಲ ತೆರವು ಮಾಡುವ ವಿಚಾರದಲ್ಲಿ ಏಕಿಷ್ಟು ವಿಳಂಬ ಮಾಡುತ್ತಿದ್ದೀರಿ, ಇದಕ್ಕೆ ನಿಮ್ಮ ಸ್ಪಷ್ಟ ಉತ್ತರವೇನು ಎಂದು ತಿಳಿಸಿ’ ಎಂದು ಪಾಲಿಕೆ ಹಾಗೂ ರೈಲ್ವೆ ಇಲಾಖೆ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು 2019ರ ಜನವರಿ 9ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.