ADVERTISEMENT

ಶನಿಮಹಾತ್ಮ ದೇವಳ ತೆರವಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:10 IST
Last Updated 21 ಮಾರ್ಚ್ 2019, 20:10 IST
   

ಬೆಂಗಳೂರು: ನಗರದ ಮೆಜೆಸ್ಟಿಕ್ ಸಮೀಪದ ಓಕಳೀಪುರಂ ಜಂಕ್ಷನ್‌ನಲ್ಲಿ ಕೈಗೊಂಡಿರುವ ಕಾರಿಡಾರ್ ಯೋಜನೆ ಸಮೀಪದಲ್ಲಿರುವ ಶನಿಮಹಾತ್ಮ ದೇವಾಲಯವನ್ನು 3 ತಿಂಗಳಲ್ಲಿ ತೆರವುಗೊಳಿಸಬೇಕು ಎಂದು ಹೈಕೋರ್ಟ್, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.

ಮತ್ತಿಕೆರೆಯ ನಿವಾಸಿ ಕೆ.ಎಸ್.ಸುಬ್ರಮಣ್ಯನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಲೇವಾರಿ ಮಾಡಿದೆ.

ಏನಿದು ಅರ್ಜಿ?: ‘ಮೆಜೆಸ್ಟಿಕ್‌ಗೆ ಹೊಂದಿಕೊಂಡಂತಿರುವ ಓಕಳೀಪುರಂ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ₹200 ಕೋಟಿ ವೆಚ್ಚದಲ್ಲಿ ಕಾರಿಡಾರ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರೈಲ್ವೆ ಸಚಿವಾಲಯ ಹಾಗೂ ಪಾಲಿಕೆ ಜಂಟಿಯಾಗಿ ಇದನ್ನು ಕೈಗೊಂಡಿವೆ. ಆದರೆ, ಇಲ್ಲಿನ ಶನಿಮಹಾತ್ಮ ದೇವಾಲಯದಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ADVERTISEMENT

‘ಮೊದಲು ಇಲ್ಲಿ ಯಾವುದೇ ದೇವಾಲಯ ಇರಲಿಲ್ಲ. ಯಾರೊ ಶನಿ ದೇವರ ಫೋಟೊ ತಂದಿಟ್ಟಿದ್ದರು. ನಂತರ ಅನಧಿಕೃತ ದೇವಾಲಯ ನಿರ್ಮಿಸಲಾಗಿದೆ. ದೇವಾಲಯ ತೆರವಿಗೆ ಪಾಲಿಕೆ, ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲ ಎಸ್‌.ಬಸವರಾಜ್‌ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.