ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುವುದಾಗಿ ಆಮಿಷವೊಡ್ಡಿ ನಗರದ ಯುವಕರೊಬ್ಬರಿಂದ ₹ 15.85 ಲಕ್ಷ ಪಡೆದು ವಂಚಿಸಲಾಗಿದೆ.
‘ವಿ.ವಿ.ಪುರ ನಿವಾಸಿಯಾಗಿರುವ 18 ವರ್ಷದ ಯುವಕ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಆನಂದ್ ಸೀತಾರಾಮ್ ಶರ್ಮಾ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿರುವ ಯುವಕ, ಬಾಲ್ಯದಿಂದಲೇ ಹೂಡಿಕೆ ಮಾಡಲಾರಂಭಿಸಿದ್ದರು. ಅದಕ್ಕಾಗಿ ಡಿಮ್ಯಾಟ್ ಖಾತೆಗಳನ್ನೂ ತೆರೆದಿದ್ದರು. 2021ರಲ್ಲಿ ಅವರಿಗೆ ಕರೆ ಮಾಡಿದ್ದ ಆರೋಪಿ, ಸೆಬಿ ಪ್ರತಿನಿಧಿ ಎಂಬುದಾಗಿ ಪರಿಚಯಿಸಿಕೊಂಡಿದ್ದ. ಹೆಚ್ಚು ಬಂಡವಾಳ ಹೂಡಿದರೆ, ದುಪ್ಪಟ್ಟು ಲಾಭ ಮಾಡಿಕೊಡುವುದಾಗಿ ಹೇಳಿದ್ದ. ಅದನ್ನು ನಂಬಿದ್ದ ಯುವಕ, ಹಂತ ಹಂತವಾಗಿ ₹ 15.85 ಲಕ್ಷ ಹೂಡಿಕೆ ಮಾಡಿದ್ದ. ಡಿಮ್ಯಾಟ್ ಖಾತೆಗಳ ವಿವರ ಹಾಗೂ ಪಾಸ್ವರ್ಡ್ ಪಡೆದಿದ್ದ ಆರೋಪಿ ವಂಚಿಸಿ ಪರಾರಿಯಾಗಿದ್ದಾನೆ’ ಎಂದೂ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.