ADVERTISEMENT

ಶಿವರಾಮ ಕಾರಂತ ಬಡಾವಣೆ: 2 ವಾರಗಳಲ್ಲಿ ಅಧಿಸೂಚನೆ

ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 19:26 IST
Last Updated 12 ಜುಲೈ 2022, 19:26 IST

ನವದೆಹಲಿ: ಬೆಂಗಳೂರಿನಲ್ಲಿ ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಎರಡು ವಾರಗಳಲ್ಲಿ ಟೆಂಡರ್ ಅಧಿಸೂಚನೆ ಹೊರಡಿಸುವಂತೆ ಕರ್ನಾಟಕ ಸರ್ಕಾರ, ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸುಪ್ರೀಂ ಕೋರ್ಟ್‌ ಮಂಗಳವಾರ
ನಿರ್ದೇಶನ ನೀಡಿದೆ.

17 ವಿವಿಧ ಗ್ರಾಮಗಳಲ್ಲಿ ಒಟ್ಟು 3,546 ಎಕರೆ 12 ಗುಂಟೆಗಳಲ್ಲಿ ಶಿವರಾಮ ಕಾರಂತ ಬಡಾವಣೆ ರಚಿಸಲು ₹5,337 ಕೋಟಿ ಪರಿಷ್ಕೃತ ಅಂದಾಜಿಗೆ ಕರ್ನಾಟಕ ಸರ್ಕಾರ ಜುಲೈ 8ರಂದು ಅನುಮೋದನೆ ನೀಡಿದೆ.

286 ಎಕರೆ 15 ಗುಂಟೆ ಜಾಗ ಭೂಸ್ವಾಧೀನಕ್ಕೆ ನಾಲ್ಕು ವಾರಗಳಲ್ಲಿ ಪ್ರಾಧಿಕಾರವು ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು ಎಂದೂ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಈ ಜಾಗಗಳನ್ನು ಬಡಾವಣೆಗೆ ಸೇರಿಸುವ ಕಾರ್ಯಸಾಧ್ಯತೆ ಬಗ್ಗೆಯೂ ಪರಿಶೀಲಿ
ಸುವಂತೆ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ಪೀಠವು ಸೂಚಿಸಿದೆ.

ADVERTISEMENT

ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್‌ ಸಮಿತಿಯ 16 ಹಾಗೂ 17ನೇ ಪ್ರಗತಿ ವರದಿಗಳನ್ನು ಸಮಿತಿಯ ಪರವಾಗಿ ವಕೀಲ ಸಂಜಯ್‌ ಎಂ. ನುಲಿ ಅವರು ಜೂನ್‌ 6 ಹಾಗೂ ಜೂನ್‌ 30ರಂದು ನ್ಯಾಯಪೀಠಕ್ಕೆಸಲ್ಲಿಸಿದ್ದರು. ಈ ವರದಿಗಳನ್ನು ಪರಿಶೀಲಿಸಿದ ಬಳಿಕ ಪೀಠವು ಈ ನಿರ್ದೇಶನ ನೀಡಿದೆ. ಬಡಾವಣೆ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಪೀಠವು ಇದೇ ವೇಳೆ ಗಮನಿಸಿತು. ಪ್ರಾಧಿಕಾರವು ಎರಡು ವಾರಗಳಲ್ಲಿ ಪ್ರಗತಿ ವರದಿಯನ್ನು ಸಲ್ಲಿಸಬೇಕು ಎಂದೂ ಪೀಠ ಹೇಳಿತು.

ಪ್ರಸ್ತಾವಿತ ಬಡಾವಣೆ ನಿರ್ಮಾಣಕ್ಕಾಗಿ17 ಗ್ರಾಮಗಳಲ್ಲಿ 416 ಎಕರೆ ಹಾಗೂ 30 ಗುಂಟೆ ಸರ್ಕಾರಿ ಜಾಗ ಭೂಸ್ವಾಧೀನಕ್ಕೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿರುವುದನ್ನು ಪೀಠ ಗಮನಿಸಿತು. ಇದರಲ್ಲಿ 225 ಎಕರೆ ಹಾಗೂ 9 ಗುಂಟೆ ಜಾಗವನ್ನು ಸಾರ್ವಜನಿಕ ಉದ್ದೇಶದ ಬಳಕೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಭಾಗಶಃ ಅನುಮೋದನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.