ಬೆಂಗಳೂರು: ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿ, ಎಲೆಕ್ಟ್ರಿಶಿಯನ್ ಗಣೇಶ್ ಅವರನ್ನು ಕೊಲೆ ಮಾಡಿದ್ದ ರೌಡಿಯನ್ನು ಕಾಲಿಗೆ ಗುಂಡು ಹೊಡೆದು ಪೊಲೀಸರು ಗುರುವಾರ ಮಧ್ಯಾಹ್ನ ಬಂಧಿಸಿದ್ದಾರೆ.
ರೌಡಿ ಲಗ್ಗೆರೆ ಸೀನ ಅಲಿಯಾಸ್ ಶ್ರೀನಿವಾಸ್ (28) ಬಂಧಿತ ಆರೋಪಿ. ಸೀನನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಕೊಲೆ, ಮೂರು ಕೊಲೆ ಯತ್ನ ಪ್ರಕರಣಗಳು ಮತ್ತು ಹಲವು ಸುಲಿಗೆ ಪ್ರಕರಣಗಳು ದಾಖಲಾಗಿವೆ.
ಇದೇ 17ರಂದು ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿ ಚಂದುಸಾ ಹೋಟೆಲ್ ಬಳಿ ರಾತ್ರಿ 12 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದ ಗಣೇಶ್ ಅವರನ್ನು ಒಂದೇ ಬೈಕ್ನಲ್ಲಿ ಬಂದ ಸೀನ ಮತ್ತು ಆತನ ಸಹಚರರು ಲಾಂಗ್ ಬೀಸಿ ಕೊಲೆ ಮಾಡಿ, ನಂತರ ಸ್ವಲ್ಪ ದೂರ ಹೋಗಿಅಂಗಡಿ ಬಾಗಿಲು ಹಾಕಿ ನಿಂತಿದ್ದ ಮಾಲೀಕನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಉತ್ತರ ವಿಭಾಗದ ಡಿಸಿಪಿಶಶಿಕುಮಾರ್ ಅವರು ಕೊಲೆ ಆರೋಪಿಗಳನ್ನು ಬಂಧಿಸಲು ಮಲ್ಲೇಶ್ವರಂ ಮತ್ತು ವೈಯಾಲಿಕಾವಲ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದ ಎರಡು ಪ್ರತ್ಯೇಕ ತಂಡ
ಗಳನ್ನು ರಚಿಸಿದ್ದರು. ಸೀನನ ಬಂಧನಕ್ಕೆ ಬೆನ್ನು ಬಿದ್ದ ಈ ತಂಡಗಳು, ಗಂಗೊಂಡನಹಳ್ಳಿ ಮುಖ್ಯ ರಸ್ತೆಯ ತಿಪ್ಪೇನಹಳ್ಳಿ ಬಳಿಗುರುವಾರ ಮಧ್ಯಾಹ್ನ ಆತ ಓಡಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು.
ಮಲ್ಲೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್. ಪ್ರಸಾದ್ ತಂಡ ಸೀನನನ್ನು ಬಂಧಿಸಲು ಹೋದಾಗ, ಆತ ಕಾನ್ಸ್ಟೆಬಲ್ ಸುನೀಲ್ ಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ತಕ್ಷಣ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಇನ್ಸ್ಪೆಕ್ಟರ್, ಶರಣಾಗುವಂತೆ ಆರೋಪಿಗೆ ಸೂಚಿಸಿದ್ದರು.
ಆದರೆ, ಪೊಲೀಸರ ಮಾತಿಗೆ ಸೀನ ಬಗ್ಗದೇ ಇದ್ದಾಗ, ತಮ್ಮ ಮತ್ತು ಇತರ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆತನ ಬಲ ಕಾಲಿಗೆ ಗುಂಡು ಹಾರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.