ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಗರಿಮೆಗೆ ಸಿದ್ದರಾಮಯ್ಯ ಅವರು ಭಾಜನರಾದ ಕಾರಣ ಅವರ ಅಭಿಮಾನಿಗಳು ನಾಟಿ ಕೋಳಿ ಊಟ ವಿತರಿಸಿ ಸಂಭ್ರಮಿಸಿದರು.
ಸಿದ್ದರಾಮಯ್ಯ ಅವರಿಗೆ ಪ್ರಿಯವಾದ ನಾಟಿ ಕೋಳಿ ಊಟವನ್ನು ಅಹಿಂದ ಯುವ ಘಟಕವು ಭಕ್ತನಪಾಳ್ಯದಲ್ಲಿ ಏರ್ಪಡಿಸಿತ್ತು. ಮುದ್ದೆ, ನಾಟಿ ಕೋಳಿ ಸಾರು, ಅನ್ನ, ರಸಂ, ಸಿಹಿ ವಿತರಿಸಲಾಯಿತು. 2 ಸಾವಿರ ಕೆ.ಜಿ. ನಾಟಿ ಕೋಳಿ ಮಾಂಸ ಬಳಸಲಾಗಿತ್ತು. ಒಂದು ನಿಮಿಷಕ್ಕೆ 150 ಜನರಿಗೆ ಊಟ ಬಡಿಸುವ ಸುಸಜ್ಜಿತ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಸಿದ್ಧ ಮಸಾಲೆಗಳನ್ನು ಬಳಸದೆ, ಸ್ಥಳದಲ್ಲೇ ಮಸಾಲೆ ರುಬ್ಬುವ ಮೂಲಕ ನಾಟಿ ಶೈಲಿಯಲ್ಲಿ ಅಡುಗೆ ಸಿದ್ಧಪಡಿಸಲಾಗಿತ್ತು. ಹೆಸರಘಟ್ಟ, ನೆಲಮಂಗಲ, ಸೊಂಡೆಕೊಪ್ಪ, ಕೆಜಿ ಲಕ್ಕೇನಹಳ್ಳಿಯಿಂದ ನಾಟಿ ಕೋಳಿಗಳ ಮಾಂಸವನ್ನು ತರಲಾಗಿತ್ತು. 3 ಸಾವಿರಕ್ಕೂ ಹೆಚ್ಚು ಜನ ಊಟ ಸವಿದರು.
ಕೆ.ಆರ್.ಪುರ ಕ್ಷೇತ್ರದ ಕೆ.ಚನ್ನಸಂದ್ರದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಗ್ರಾಮಸ್ಥರು 500 ಕೆ.ಜಿ. ನಾಟಿ ಕೋಳಿ ಬಿರಿಯಾನಿ ವ್ಯವಸ್ಥೆ ಮಾಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಜನರು ನಾಟಿ ಕೋಳಿ ಬಿರಿಯಾನಿ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.