ಬೆಂಗಳೂರು: ಪ್ರಸಿದ್ಧ ಜೋಗದ ಜಲಪಾತವನ್ನು ಸರ್ವಋತು ಜಲಪಾತವಾಗಿ ಅಭಿವೃದ್ಧಿಪಡಿಸುವ ಯೋಜನೆ ಮುಂದುವರಿಯಲಿದೆ ಎಂದು ಉದ್ಯಮಿ ಬಿ.ಆರ್. ಶೆಟ್ಟಿ ಹೇಳಿದರು.
ಇದಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಕೊಡಮಾಡಿದ ಸರ್ ಎಂ. ವಿಶ್ವೇಶ್ವರಾಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕರ್ನಾಟಕ ಸೇರಿದಂತೆ ದೇಶದ ಮೂಲಸೌಲಭ್ಯ ಅಭಿವೃದ್ಧಿಗೆ ಅರಬ್ ಸಂಯುಕ್ತ ರಾಷ್ಟ್ರಗಳ ಹೂಡಿಕೆದಾರರನ್ನು ಕರೆತರಲು ಸಿದ್ಧವಿರುವುದಾಗಿ ಅವರು ಭರವಸೆ ನೀಡಿದರು.
ಮನಸ್ಥಿತಿ ಬದಲಾಗಬೇಕು: ಪ್ರಮುಖ ಭಾಷಣ ಮಾಡಿದ ಸಂಸದ ಸುಬ್ರಮಣಿಯನ್ ಸ್ವಾಮಿ, ‘ಜನರ ಮನಸ್ಥಿತಿ ಬದಲಾಗದೆ ದೇಶದ ಪ್ರಗತಿ ಅಸಾಧ್ಯ. ನಾವು ಕೀಳರಿಮೆಯಿಂದ ಬಳಲುತ್ತಿದ್ದು, ಅದನ್ನು ತೊರೆಯಬೇಕು’ ಎಂದು ಕಿವಿಮಾತು ಹೇಳಿದರು.
‘ಹೊಸ ಹೊಸ ಅನ್ವೇಷಣೆಗಳ ಮೂಲಕ ಬೇರೆ ರಾಷ್ಟ್ರಗಳಿಗೆ ಸರಿಸಮನಾಗಿ ನಿಲ್ಲಬೇಕು. ನೈಸರ್ಗಿಕವಾಗಿ ನಮಗಿರುವಷ್ಟು ಅನುಕೂಲ ಬೇರೆ ಯಾವ ರಾಷ್ಟ್ರಕ್ಕೂ ಇಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕು. ವಿಶ್ವೇಶ್ವರಾಯ ಅವರಂತೆ ದೂರದೃಷ್ಟಿಯಿಂದ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಹಾಗೂ ತಮಿಳುನಾಡು ಕಾವೇರಿ ನೀರಿಗಾಗಿ ಗುದ್ದಾಡುತ್ತಿವೆ. ಆದರೆ, ಸಮುದ್ರದ ನೀರನ್ನು ಸಿಹಿಯಾಗಿ ಮಾರ್ಪಡಿಸಿ, ಬಳಸುವ ಆಲೋಚನೆ ಯಾರಿಗೂ ಇಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಉದಾಹರಿಸಿದರು.
ನಿಷ್ಠೆ, ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಸ್ವಾರ್ಥದಿಂದ ದುಡಿದರೆ ಸಮಾಜ ಬದಲಾವಣೆ ಆಗುವುದು ನಿಶ್ಚಿತ ಎಂದು ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಚಿವ ಡಿ.ವಿ. ಸದಾನಂದಗೌಡ ನುಡಿದರು.
ವಾಣಿಜ್ಯಹಾಗೂ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.