ಬೆಂಗಳೂರು: ಬೇಗೂರಿನ ಲಕ್ಷ್ಮಿಪುರ ಬಡಾವಣೆಯ ಎಂ.ಎನ್. ಕ್ರೆಡೆನ್ಸ್ ಫ್ಲೋರಾ ಅಪಾರ್ಟ್ಮೆಂಟ್ನ ಮಳೆ ನೀರು ಸಂಗ್ರಹಕ್ಕೆ ತೆರೆದಿದ್ದ ಗುಂಡಿ ಸ್ವಚ್ಛಗೊಳಿಸುವ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರ ಮನುಷ್ಯನದ್ದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ ಎಲ್) ವರದಿಯಿಂದ ಗೊತ್ತಾಗಿದೆ. ವರದಿ ಆಧರಿಸಿ ಬೇಗೂರು ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜೂನ್ 16ರಂದು ಗುತ್ತಿಗೆ ಕಾರ್ಮಿಕರು ಮಳೆ ನೀರು ಸಂಗ್ರಹ ಗುಂಡಿ ಸ್ವಚ್ಛಗೊಳಿಸುವಾಗ ಅಸ್ಥಿಪಂಜರದ ಜೊತೆಗೆ ಒಂದು ಪ್ಯಾಂಟ್ ಪತ್ತೆ ಆಗಿತ್ತು. ಮೇಲ್ನೋಟಕ್ಕೆ ಪುರುಷನ ಅಸ್ಥಿಪಂಜರವೆಂದು ಕಂಡುಬಂದಿತ್ತು. ದೃಢೀಕರಿಸಲು ಎಫ್ಎಸ್ಎಲ್ಗೆ ರವಾನಿಸಲಾಗಿತ್ತು.
‘ಅಸ್ಥಿಪಂಜರವು ಎಷ್ಟು ವರ್ಷಗಳ ಹಿಂದಿನದ್ದು ಎಂದು ಹೇಳುವುದಕ್ಕೇ ಈಗಲೇ ಸಾಧ್ಯವಿಲ್ಲ. ಇನ್ನಷ್ಟು ಅಧ್ಯಯನ ಬಳಿಕ ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದರು.
‘ಅಸ್ಥಿಪಂಜರವು ಮನುಷ್ಯನದ್ದೇ ಎಂದು ಖಚಿತವಾಗಿದೆ. ಅಲ್ಲಿ ಪತ್ತೆಯಾಗಿರುವ ಮೂಳೆಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗುವುದು. ಡಿಎನ್ಎ ಪರೀಕ್ಷೆಯಿಂದ ಮೃತನ ವಯಸ್ಸು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ತಿಳಿಯಬಹುದಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.