ADVERTISEMENT

ಸ್ಯಾಟಲೈಟ್‌ ಬಸ್‌ ನಿಲ್ದಾಣ: ಸ್ಕೈ– ವಾಕ್‌ಗೆ ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:48 IST
Last Updated 15 ನವೆಂಬರ್ 2022, 20:48 IST

ಬೆಂಗಳೂರು:ಮೈಸೂರು ರಸ್ತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದ ಸಮೀಪ ಅಳವಡಿಸಲಾಗುತ್ತಿರುವ ಸ್ಕೈ–ವಾಕ್‌ ಕಾಮಗಾರಿಯನ್ನು (ಬಿಎಂಟಿಸಿ ಸಬ್ ವೇ ಪ್ರವೇಶ ದ್ವಾರ) ಪೂರ್ಣ ಗೊಳಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಸ್ಕೈ–ವಾಕ್ ಅಳವಡಿಕೆ ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮೆಸರ್ಸ್‌ ಶಕ್ತಿ ಡೆವಲಪರ್ಸ್ ಲಿಮಿಟೆಡ್‌ ಕಂಪನಿಗೆ ಹೈಕೋರ್ಟ್‌ 2022ರ ಜೂನ್‌ 17ರಂದು ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಬಿಎಂಪಿ ಮೇಲ್ಮನವಿ ಸಲ್ಲಿಸಿತ್ತು.ಈ ಮೇಲ್ಮನವಿಯನ್ನು ಮಂಗಳವಾರ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಕಾಮಗಾರಿ ಪೂರ್ಣಗೊಳಿಸಲು ಮೆಸರ್ಸ್‌ ಶಕ್ತಿ ಡೆವಲಪರ್ಸ್ ಲಿಮಿಟೆಡ್ ಕಂಪನಿಗೆ ಅನುಮತಿ ನೀಡಿದೆ.

‘ನಿಗದಿತ ಅವಧಿಯಲ್ಲಿ ಸ್ಕೈ–ವಾಕ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಗುತ್ತಿಗೆಯನ್ನು ರದ್ದುಪಡಿಸಿದೆ. ವಾಸ್ತವದಲ್ಲಿ ಸರ್ಕಾರಿ ಪ್ರಾಧಿಕಾರಗಳಿಂದಲೇ ಕಾಮಗಾರಿ ವಿಳಂಬವಾಗಿದೆ. ಈ ಕಾರಣ ಪರಿಗಣಿಸಿಯೇ ಏಕಸದಸ್ಯ ನ್ಯಾಯಪೀಠವು ಸ್ಕೈ–ವಾಕ್ ಅಳವಡಿಕೆಗೆ ಅನುಮತಿ ನೀಡಿದೆ. ಹೈಕೋರ್ಟ್ ಆದೇಶದ ನಂತರ ಗುತ್ತಿಗೆದಾರ ಕಂಪನಿ ಕಾಮಗಾರಿ ಆರಂಭಿಸಿದೆ. ಈ ಹಂತದಲ್ಲಿ ಸ್ಕೈ–ವಾಕ್ ಅಳವಡಿಕೆ ಸ್ಥಗಿತಗೊಳಿಸಬಾರದು’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ADVERTISEMENT

ಚಾಟಿ: ಸಂಚಾರ ದಟ್ಟಣೆ ಇರುವುದರಿಂದ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಿತ್ತು. ಇದನ್ನು ಪರಿಗಣಿಸಿಯೇ ಬಿಬಿಎಂಪಿ, ಸ್ಯಾಟಲೈಟ್ ಬಸ್ ನಿಲ್ದಾಣದಿಂದ ರಮಣಿ ಟಿಂಬರ್ ಮಾರ್ಕ್‌ವರೆಗೆ ಮತ್ತು ಗಾಳಿ ಆಂಜನೇಯ ದೇವಸ್ಥಾನದ ಬಳಿ ಎರಡು ಪ್ರತ್ಯೇಕ ಸ್ಕೈ–ವಾಕ್ ನಿರ್ಮಿಸಲು 2017ರಲ್ಲಿ ಗುತ್ತಿಗೆ ನೀಡಿತ್ತು. ಸ್ಯಾಟಲೈಟ್ ಬಸ್ ನಿಲ್ದಾಣ-ರಮಣಿ ಟಿಂಬರ್ ಮಾರ್ಕ್ ಸ್ಕೈ–ವಾಕ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಎಸ್‌ಆರ್‌ಟಿಸಿ ಮತ್ತು ಸಂಚಾರ ವಿಭಾಗದ ಪೊಲೀಸರು, ಬಿಎಂಟಿಸಿ ಸಬ್ ವೇ ಪ್ರವೇಶದ್ವಾರದ ಬಳಿ ಸ್ಕೈ–ವಾಕ್ ಅಳವಡಿಕೆಗೆ 2018ರ ಸೆಪ್ಟೆಂಬರ್‌ನಲ್ಲಿ ಅನುಮತಿ ನೀಡಿದ್ದವು. ಅದಕ್ಕೆ ಬಿಬಿಬಿಎಂಪಿ ನಿರಾಕ್ಷೇಪಣಾ ಪತ್ರವನ್ನೂ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.