ADVERTISEMENT

ಬೆಂಗಳೂರು| ಘನತ್ಯಾಜ್ಯ: ಜ್ಞಾನಭಾರತಿಗೆ ಮತ್ತೆ ನೋಟಿಸ್‌

ಸಂಸ್ಕರಣೆ, ವಿಲೇವಾರಿ ವ್ಯವಸ್ಥೆ ಸ್ಥಾಪಿಸಲು ಬಿಬಿಎಂಪಿಯಿಂದ 5ನೇ ‘ನೆನಪೋಲೆ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 6:54 IST
Last Updated 1 ಮಾರ್ಚ್ 2023, 6:54 IST
ಜ್ಞಾನಭಾರತಿ ಆವರಣದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು
ಜ್ಞಾನಭಾರತಿ ಆವರಣದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯವನ್ನು ವಿವಿ ಆವರಣದಲ್ಲೇ ಸಂಸ್ಕರಿಸುವಂತೆ ಬಿಬಿಎಂಪಿ 5ನೇ ಬಾರಿಗೆ ‘ನೆನಪೋಲೆ’ಯನ್ನು ಕಳುಹಿಸಿದೆ.

‘ಬೃಹತ್‌ ಪ್ರಮಾಣದ ತ್ಯಾಜ್ಯ ಉತ್ಪಾದಕ’ ವ್ಯಾಪ್ತಿಗೆ ಜ್ಞಾನಭಾರತಿ ಒಳಪಡುವುದರಿಂದ, ಸರ್ಕಾರದ ಆದೇಶ ಹಾಗೂ ಸುತ್ತೋಲೆಗಳಲ್ಲಿ ‘ಬೃಹತ್‌ ಪ್ರಮಾಣದ ತ್ಯಾಜ್ಯ ಉತ್ಪಾದಕರ ಕರ್ತವ್ಯಗಳು’ ಹಾಗೂ ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳನ್ನು ಪಾಲಿಸಲು ವಿವಿಗೆ 2021ರ ಏಪ್ರಿಲ್‌ನಿಂದ ಸೂಚನೆ, ಪತ್ರಗಳ ಮೂಲಕ ತಿಳಿಸಲಾಗಿತ್ತು. ಇದನ್ನು ಪಾಲಿಸದ್ದರಿಂದ 2023ರ ಜನವರಿ ತಿಂಗಳಿಂದ ಜ್ಞಾನಭಾರತಿ ಆವರಣದಿಂದ ಘನತ್ಯಾಜ್ಯ ಸಂಗ್ರಹ ಮಾಡುವುದನ್ನು ಬಿಬಿಎಂಪಿ ನಿಲ್ಲಿಸಿದೆ. ಹೀಗಾಗಿ ವಿವಿ ಆವರಣದಲ್ಲೇ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿದೆ.

‘ಜ್ಞಾನಭಾರತಿ ಆವರಣದಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿದು, ಬೆಂಕಿ ಹಚ್ಚಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕು’ ಎಂದು ಸಂತೋಷ್‌ ಮರೂರು ಅವರು ಬಿಬಿಎಂಪಿಯ ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದರು.

ADVERTISEMENT

‘ಬೃಹತ್‌ ಪ್ರಮಾಣದ ತ್ಯಾಜ್ಯ ಉತ್ಪಾದಕರ ಕರ್ತವ್ಯಗಳನ್ನು ಜ್ಞಾನಭಾರತಿಯೇ ನಿರ್ವಹಿಸಬೇಕು. ಘನತ್ಯಾಜ್ಯ ಸಂಸ್ಕರಣೆ, ವಿಲೇವಾರಿ ವಿವಿಗೇ ಸೇರಿದ್ದಾಗಿದೆ. ಅದರ ಕ್ರಮ ಕೈಗೊಂಡು ದೂರು ನೀಡಿರುವ ಸಂತೋಷ್‌ ಹಾಗೂ ಬಿಬಿಎಂಪಿಗೆ ಮಾಹಿತಿ ನೀಡಬೇಕು’ ಎಂದು ಬಿಬಿಎಂಪಿ ಫೆ.28ರಂದು ಬೆಂಗಳೂರು ಕುಲಪತಿ ಅವರಿಗೆ 5ನೇ ನೆನಪೋಲೆ ಕಳುಹಿಸಿದೆ.

‘ಬೆಂಗಳೂರು ವಿವಿ ಆವರಣದಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸುತ್ತೇವೆ’ ಎಂದು ವಿವಿಯ ಕುಲಪತಿ ಸೇರಿದಂತೆ ಎಲ್ಲರೂ ನೋಟಿಸ್‌ ಅಥವಾ ತ್ಯಾಜ್ಯಕ್ಕೆ ಬೆಂಕಿಯಂತಹ ಪ್ರಕರಣ ಹೆಚ್ಚಾದಾಗ ಹೇಳುತ್ತಾರೆ. ನಂತರ ಮರೆತುಹೋಗುತ್ತಾರೆ’ ಎಂಬುದು ಸ್ಥಳೀಯರ ಅಭಿಪ್ರಾಯ. ಇನ್ನು ಇತ್ತೀಚೆಗೆ ತ್ಯಾಜ್ಯ ನಿರ್ವಹಣೆಯ ಬಗ್ಗೆ 15 ದಿನಗಳಲ್ಲಿ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರೂ ಬೆಂಗಳೂರು ಜ್ಞಾನಭಾರತಿ ವಿವಿಗೆ ನೋಟಿಸ್‌ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.