ADVERTISEMENT

‘ವೈದ್ಯಕೀಯ ಕಾಲೇಜುಗಳಲ್ಲಿ ಅಂಗಾಂಗ ಸಂಗ್ರಹ ಕೇಂದ್ರ’

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ *ಸ್ಪರ್ಶ್ ಆಸ್ಪತ್ರೆಯಿಂದ ಬಹು ಅಂಗಾಂಗ ಕಸಿ ಕೆಂದ್ರ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 16:12 IST
Last Updated 28 ಜನವರಿ 2022, 16:12 IST
ಸ್ಪರ್ಶ್ ಆಸ್ಪತ್ರೆಯ ಬಹು ಅಂಗಾಂಗ ಕಸಿ ಕೆಂದ್ರಕ್ಕೆ ಡಾ.ಕೆ. ಸುಧಾಕರ್ ಚಾಲನೆ ನೀಡಿದರು. ಡಾ. ಶರಣ್ ಶಿವರಾಜ್ ಪಾಟೀಲ್ ಮತ್ತು ಕಸಿ ತಜ್ಞ ಡಾ. ಕುಮುದ್ ಧಿತಲ್ ಇದ್ದಾರೆ – ಪ್ರಜಾವಾಣಿ ಚಿತ್ರ
ಸ್ಪರ್ಶ್ ಆಸ್ಪತ್ರೆಯ ಬಹು ಅಂಗಾಂಗ ಕಸಿ ಕೆಂದ್ರಕ್ಕೆ ಡಾ.ಕೆ. ಸುಧಾಕರ್ ಚಾಲನೆ ನೀಡಿದರು. ಡಾ. ಶರಣ್ ಶಿವರಾಜ್ ಪಾಟೀಲ್ ಮತ್ತು ಕಸಿ ತಜ್ಞ ಡಾ. ಕುಮುದ್ ಧಿತಲ್ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಒಬ್ಬ ವ್ಯಕ್ತಿ ಮರಣ ಹೊಂದಿದ ಮೇಲೆ ಎಂಟು ಮಂದಿಗೆ ಬದುಕು ನೀಡಲು ಸಾಧ್ಯ. ಆದರೆ, ಬಹುತೇಕರು ತಪ್ಪು ಗ್ರಹಿಕೆಯಿಂದ ಅಂಗಾಂಗ ದಾನ ಮಾಡುತ್ತಿಲ್ಲ. ಅಂಗಾಂಗ ದಾನ ಹಾಗೂ ಕಸಿ ಹೆಚ್ಚಿಸಲು ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಅಂಗಾಂಗ ಸಂಗ್ರಹ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು’ ಎಂದುಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸ್ಪರ್ಶ್ ಆಸ್ಪತ್ರೆಯ ಬಹು ಅಂಗಾಂಗ ಕಸಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಬದಲಾದ ಜೀವನ ವಿಧಾನ ಸೇರಿದಂತೆ ವಿವಿಧ ಕಾರಣಗಳಿಂದ ಅಂಗಾಂಗ ವೈಫಲ್ಯ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅಂಗಾಂಗಗಳ ಕೊರತೆಯಿಂದಾಗಿಸಮಸ್ಯೆ ಎದುರಿಸುತ್ತಿರುವವರಲ್ಲಿ ಶೇ 4 ರಷ್ಟು ಮಂದಿಗೆ ಮಾತ್ರ ಕಸಿ ದೊರೆಯುತ್ತಿವೆ. ಹೀಗಾಗಿ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಸೇರಿದಂತೆ ವಿವಿಧೆಡೆ ಅಂಗಾಂಗ ಸಂಗ್ರಹ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಶಸ್ತ್ರಚಿಕಿತ್ಸಕರಿಗೂ ಅಂಗಾಂಗ ಕಸಿ ಬಗ್ಗೆ ತರಬೇತಿ ನೀಡಲು ಕ್ರಮವಹಿಸಲಾಗುವುದು. ನಿಮ್ಹಾನ್ಸ್‌ನಲ್ಲಿ ಮಿದುಳು ನಿಷ್ಕ್ರೀಯಗೊಂಡ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಹೀಗಾಗಿ, ಆ ಸಂಸ್ಥೆಯೊಂದಿಗೆಬಿಎಂಸಿಆರ್‌ಐ ಒಪ್ಪಂದ ಮಾಡಿಕೊಂಡು ಅಂಗಾಂಗ ಕಸಿಗೆ ಕ್ರಮವಹಿಸಲಿದೆ’ ಎಂದು ತಿಳಿಸಿದರು.

ADVERTISEMENT

ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷಡಾ. ಶರಣ್ ಶಿವರಾಜ್ ಪಾಟೀಲ, ‘ಅಂಗಾಂಗ ದಾನ ಹಾಗೂ ಕಸಿ ಬಗ್ಗೆ ಜನರಿಗೆ ಜಾಗೃತಿ ಮೂಡಬೇಕು. ಅಂಗಾಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಲ್ಲಿ ಶೇ 80 ರಷ್ಟು ಮಂದಿಗೆ ಅಂಗಾಂಗಗಳು ಸಿಗುತ್ತಿಲ್ಲ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಶೇ 60 ರಷ್ಟು ನವೋದ್ಯಮಗಳು ಬೆಂಗಳೂರಿನಲ್ಲಿಯೇ ಇವೆ. ದೊಡ್ಡ ವೈದ್ಯಕೀಯ ಸಂಸ್ಥೆಗಳೂ ಇಲ್ಲಿವೆ. ನಮ್ಮ ಜನರಿಗೆ ಹಾಗೂ ಹೊರಗಿನವರಿಗೆ ತಂತ್ರಜ್ಞಾನದ ನೆರವಿನಿಂದ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು. ವಿವಿಧ ಸಂಸ್ಥೆಗಳು ಒಟ್ಟಾಗಿ ಆವಿಷ್ಕಾರ ಮಾಡಿದರೆ ಅಲ್ಪ ವೆಚ್ಚದಲ್ಲಿ ಚಿಕಿತ್ಸೆಗಳನ್ನು ನೀಡಲು ಸಾಧ್ಯ. ಅಂಗಾಂಗ ಕಸಿಯನ್ನು ನಾವು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ’ ಎಂದರು.

‘ನಿಯಂತ್ರಣದಲ್ಲಿ ಮರಣ ಪ್ರಮಾಣ’

‘ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ ಶೇ 95 ರಷ್ಟು ಮಂದಿ ಮನೆ ಆರೈಕೆಗೆ ಒಳಗಾಗಿದ್ದಾರೆ. ಸಹ ಅಸ್ವಸ್ಥತೆ ಸೇರಿದಂತೆ ವಿವಿಧ ಕಾರಣದಿಂದ ಕೆಲವರು ಮೃತಪಡುತ್ತಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 0.005 ರಷ್ಟು ಮಾತ್ರ ಇದೆ. ಹೀಗಾಗಿ, ಆತಂಕಪಡುವ ಅಗತ್ಯವಿಲ್ಲ’ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.