ಬೆಂಗಳೂರು: ತನ್ನಿಷ್ಟದ ಶಾಲೆಗೆ ಸೇರಿಸಲಿಲ್ಲವೆಂಬ ಕಾರಣಕ್ಕೆ ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗಿ ಮನೆಯಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ಗುಜರಾತ್ನಲ್ಲಿ ಪತ್ತೆಯಾಗಿದ್ದಾಳೆ.
’ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಬಾಲಕಿ, 2021ರ ಅಕ್ಟೋಬರ್ 31ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಠಾಣೆಗೆ ದೂರು ನೀಡಿದ್ದ ಪೋಷಕರು, ’ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗಿದ್ದ ಮಗಳು, ಆತ್ಮಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳುತ್ತಿದ್ದಳು. ಅದೇ ಕಾರಣಕ್ಕೆ ಆಕೆ ಮನೆ ಬಿಟ್ಟು ಹೋಗಿದ್ದು, ಹುಡುಕಿಕೊಡಿ‘ ಎಂದು ಕೋರಿದ್ದರು‘ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
’ಮನೆ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಬಾಲಕಿಯೊಬ್ಬಳೇ ಸುತ್ತಾಡುತ್ತಿದ್ದ ಸಂಗತಿ ಗೊತ್ತಾಗಿತ್ತು. ಸ್ವಯಂಪ್ರೇರಿತವಾಗಿ ಬಾಲಕಿ ಮನೆ ಬಿಟ್ಟು ಹೋಗಿರುವುದು
ತಿಳಿಯಿತು.‘
’ಬಾಲಕಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಗುಜರಾತ್ನಲ್ಲಿರುವ ಆಶ್ರಮವೊಂದಕ್ಕೆ ಬಾಲಕಿ ಹೋಗಿ
ರುವ ಮಾಹಿತಿ ಸಿಕ್ಕಿತ್ತು. ಜ. 15ರಂದು ಆಶ್ರಮಕ್ಕೆ ಹೋಗಿದ್ದ ತಂಡ, ಬಾಲಕಿ
ಯನ್ನು ರಕ್ಷಿಸಿ ಸುರಕ್ಷಿತವಾಗಿ ನಗರಕ್ಕೆ ಕರೆತಂದಿದೆ. ಮಕ್ಕಳ ಮಾನಸಿಕ ತಜ್ಞರ ಬಳಿ ಕೌನ್ಸೆಲಿಂಗ್ ಮಾಡಿಸಿ ಬಾಲಕಿಯನ್ನು ಪೋಷಕರ ಸುಪರ್ದಿಗೆ ವಹಿಸಲಾಗಿದೆ‘ ಎಂದೂ ಅಧಿಕಾರಿ ತಿಳಿಸಿದರು.
’ಶಾಲೆಗೆ ಸೇರಿಸುವ ವಿಚಾರವಾಗಿ ಬಾಲಕಿ ಹಾಗೂ ಪೋಷಕರ ನಡುವೆ ಗೊಂದಲವಿತ್ತು. ಆ ಬಗ್ಗೆ ಜಗಳವೂ ಆಗಿತ್ತು. ತನ್ನಿಷ್ಟದ ಶಾಲೆಗೆ ಪೋಷಕರು ಸೇರಿಸುತ್ತಿಲ್ಲವೆಂದು ಬಾಲಕಿ ನೊಂದಿದ್ದಳು. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳನ್ನು ನೋಡಿ, ಆತ್ಮಗಳ ಜೊತೆ ಮಾತನಾಡುತ್ತಿರುವುದಾಗಿ ಆಕೆ ಹೇಳುತ್ತಿದ್ದಳು. ₹ 2,500 ನಗದು ಹಾಗೂ ಎರಡು ಜೊತೆ ಬಟ್ಟೆ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಬಾಲಕಿ ಹೇಳಿಕೆ ನೀಡಿದ್ದಾಳೆ‘ ಎಂದೂ ಅಧಿಕಾರಿ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.