ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ–ಆಪರೇಟಿವ್ ಲಿಮಿಟೆಡ್ ಅವ್ಯವಹಾರದಿಂದ ಹಣ ಕಳೆದುಕೊಂಡಿರುವ ಠೇವಣಿದಾರರು ಆನ್ಲೈನ್ ಮೂಲಕ ಭಾನುವಾರ ಪ್ರತಿಭಟನೆ ನಡೆಸಿದರು.
‘ಫೇಸ್ಬುಕ್ ಖಾತೆಯಲ್ಲಿ ವಿಡಿಯೊ ಹರಿಬಿಟ್ಟಿದ್ದ ಠೇವಣಿದಾರರು, ‘ಹಣ ದುರ್ಬಳಕೆ ಹಾಗೂ ಅವ್ಯವಹಾರ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಿ. ನಮ್ಮ ಠೇವಣಿ ಹಣವನ್ನು ಕೂಡಲೇ ವಾಪಸು ಕೊಡಿಸಿ’ ಎಂದು ಒತ್ತಾಯಿಸಿದರು.
‘ರಾಜ್ಯ ಸರ್ಕಾರ, ಆರ್ಬಿಐ ಹಾಗೂ ಇತರೆ ಸಂಸ್ಥೆಗಳು ಬ್ಯಾಂಕ್ ವಹಿವಾಟು ಪರಿಶೀಲಿಸಿ, ಗ್ರಾಹಕರ ನಂಬಿಕೆಯ ಬ್ಯಾಂಕ್ ಎಂದು ಪ್ರಮಾಣ ಪತ್ರ ಸಮೇತ ಕೊಂಡಾಡಿದ್ದವು. ಅದನ್ನು ನಂಬಿ ಲಕ್ಷಾಂತರ ರೂಪಾಯಿ ಹಣವನ್ನು ಬ್ಯಾಂಕ್ನಲ್ಲಿ ಠೇವಣಿ ಇರಿಸಲಾಗಿತ್ತು. ಈಗ ಎಲ್ಲರೂ ಬೀದಿಗೆ ಬಂದಿದ್ದೇವೆ’ ಎಂದೂ ಠೇವಣಿದಾರರು ಹೇಳಿದರು.
‘ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಹಲವರು ಬ್ಯಾಂಕ್ ಠೇವಣಿದಾರರು. ನಿವೃತ್ತಿ ವೇತನ ಹಾಗೂ ಉಳಿತಾಯದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಠೇವಣಿ ಇರಿಸಿದ್ದರು. ಇದೀಗ ಹಣವನ್ನು ಕಳೆದುಕೊಂಡಿರುವ ಅವರೆಲ್ಲ ಹಾಸಿಗೆ ಹಿಡಿದಿದ್ದಾರೆ. ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ’ ಎಂದೂ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.