ಬೆಂಗಳೂರು: ‘ಜಿ.ವಿ. ಶ್ರೀರಾಮ ರೆಡ್ಡಿ ನಿಸ್ವಾರ್ಥ ರಾಜಕಾರಣಕ್ಕೆ ಮಾದರಿಯಾಗಿದ್ದರು. ಜೀವನದ ಕೊನೆಯವರೆಗೂ ಅವರು ಜನಪರ ಕಾಳಜಿ ಮತ್ತು ಬದ್ಧತೆಯಿಂದ ರಾಜಕಾರಣ ಮಾಡಿದ್ದರು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಮರಿಸಿದರು.
ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಸಂಪಾ ದಿಸಿರುವ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಶಾಸಕರಾಗಿದ್ದ ಅವಧಿಯಲ್ಲಿ ವಿಧಾನಸಭೆ ಅಧಿ ವೇಶನಕ್ಕೆ ರೆಡ್ಡಿ ಅವರು ಯಾವತ್ತೂ ಗೈರಾಗುತ್ತಿರಲಿಲ್ಲ. ಸ್ವಂತ ಕೆಲಸಕ್ಕಾಗಿ ನಮ್ಮ ಬಳಿ ಬಂದವರಲ್ಲ. ಅವರ ಬೇಡಿಕೆಗಳ ಹಿಂದೆ ಸದಾ ಜನಪರ ಕಾಳಜಿ ಇರುತ್ತಿತ್ತು’ ಎಂದರು.
ರೆಡ್ಡಿ ಅವರು ಒಬ್ಬರೇ ಇದ್ದರೂ ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಹೋರಾಡುತ್ತಿದ್ದರು. ಅಧಿಕೃತ ವಿರೋಧ ಪಕ್ಷಕ್ಕಿಂತಲೂ ಗಟ್ಟಿಯಾಗಿ ಮಾತನಾಡುವ ಛಾತಿ ಇತ್ತು. ಸೈದ್ಧಾಂತಿಕ ಚೌಕಟ್ಟಿನ ವ್ಯಾಪ್ತಿಯೊಳಗೆ ಅನೇಕ ಜನಪರ ವಿಚಾರಗಳಲ್ಲಿ ಇತರ ಪಕ್ಷಗಳ ಜತೆಗೂ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡ ವಿ.ಜೆ.ಕೆ. ನಾಯರ್, ಹೋರಾಟಗಾರ್ತಿ ವಿ. ಗೀತಾ ಮುಖ್ಯ ಅತಿಥಿಗಳಾಗಿದ್ದರು. ಕೃತಿಯ ಸಂಪಾದಕ ನವೀನ್ ಸೂರಿಂಜೆ, ವಕೀಲ ಎನ್. ಅನಂತ್ ನಾಯ್ಕ್, ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್
ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.