ಬೆಂಗಳೂರು: ಶ್ರೀರಾಮಪುರ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ರಾಹುಲ್ (30) ಹಾಗೂ ಅವರ ಪತ್ನಿ ರಾಣಿ (26) ಎಂಬುವರು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರದ್ದೂ ಬೇರೆ ಬೇರೆ ಧರ್ಮವಾಗಿದ್ದರಿಂದ, ಬಿಹಾರದಿಂದ ಮನೆ ಬಿಟ್ಟು ಬಂದು ಶ್ರೀರಾಂಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
‘ಶುಕ್ರವಾರ ಬೆಳಿಗ್ಗೆ ದಂಪತಿ ಮನೆಯಲ್ಲೇ ಚಿಕನ್ ಬಿರಿಯಾನಿ ಮಾಡಿ ತಿಂದಿದ್ದಾರೆ. ಮಧ್ಯಾಹ್ನ ಮನೆ ಬಾಗಿಲು ಹಾಕಿಕೊಂಡು ಒಳಗೇ ಇದ್ದರು. ರಾತ್ರಿಯಾದರೂ ಹೊರಗೆ ಬಂದಿರಲಿಲ್ಲ. ಮನೆ ಮಾಲೀಕರು, ವಿದ್ಯುತ್ ಬಿಲ್ ನೀಡಲು ಮನೆಗೆ ಹೋದಾಗಲೇ ಮೃತದೇಹಗಳು ಕಂಡಿದ್ದವು’ ಎಂದು ಪೊಲೀಸರು ಹೇಳಿದರು.
‘ಬಿಹಾರದ ರಾಹುಲ್ ಅವರನ್ನು ಮದುವೆಯಾದ ನಂತರ ಪತ್ನಿ ರಾಣಿ ಹೆಸರು ಬದಲಾಯಿಸಿಕೊಂಡಿದ್ದರು. ರಾಹುಲ್ ತಂದೆ ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದಾರೆ. ಕೆ.ಆರ್.ಪುರದಲ್ಲಿ ಪಾನಿಪೂರಿ ವ್ಯಾಪಾರ ಸಹ ನಡೆಸಿದ್ದರು. ಹೀಗಾಗಿ, ರಾಹುಲ್ ಪತ್ನಿ ಕರೆದುಕೊಂಡು ಬೆಂಗಳೂರಿಗೆ ಬಂದಿದ್ದ. ತಂದೆ ಬಳಿ ಹೋದರೆ ಬೈಯುತ್ತಾರೆಂದು ತಿಳಿದು, ಶ್ರೀರಾಮಪುರದ ಸಿದ್ದ ಉಡುಪು ತಯಾರಿಕಾ ಘಟಕದಲ್ಲೇ ಸೇಲ್ಸ್ಮನ್ ಕೆಲಸಕ್ಕೆ ಸೇರಿದ್ದ’ ಎಂದರು.
‘ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಇದೊಂದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ಕಾರಣ ತಿಳಿದುಬಂದಿಲ್ಲ. ಪೋಷಕರ ಒಪ್ಪಿಗೆ ಪಡೆದು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕವೇ ನಿಖರ ಮಾಹಿತಿ ಸಿಗಲಿದೆ’ ಎಂದೂ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.