ಯಲಹಂಕ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಂಗನಾಯಕನಹಳ್ಳಿಯ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಶುಭ ಕೋರಿದರು.
ಬಳಿಕ ಮಾತನಾಡಿದ ಅವರು, ‘ಹೋರಾಟದ ಮೂಲಕ ಬಂದಿರುವ ವಿಶ್ವನಾಥ್, ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡುತ್ತಿದ್ದು, ಅತ್ಯುತ್ತಮ ಶಾಸಕರಲ್ಲಿ ಇವರೂ ಒಬ್ಬರು. ಇಂತಹ ಶಾಸಕರು ಸಿಕ್ಕಿರುವುದು ಕ್ಷೇತ್ರದ ಜನರ ಸೌಭಾಗ್ಯ. ಬಿಡಿಎನಲ್ಲಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದರು.
ಹೊನ್ನೇನಹಳ್ಳಿಯ ಸಮೀಪದ ರೆಸಾರ್ಟ್ನಲ್ಲಿ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ವಿಶ್ವನಾಥ್ಗೆ ಶೀಘ್ರ ಸಚಿವ ಸ್ಥಾನ ಸಿಗಬೇಕು. ಈ ಸಂಬಂಧ ಮುಖ್ಯಮಂತ್ರಿ ಜೊತೆಗೆ ಚರ್ಚಿಸುವೆ’ ಎಂದರು.
ಎಸ್.ಆರ್.ವಿಶ್ವನಾಥ್ ಮಾತನಾಡಿ, ’ಕಾರ್ಯಕ್ರಮದಲ್ಲಿ 50 ಮಂದಿ ಅಂಗವಿಕಲರಿಗೆ ವಾಹನ, 300 ತಳ್ಳುಗಾಡಿ, 2000 ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಲೇಖನಿ ಸಾಮಗ್ರಿ, ಕಾರ್ಮಿಕ ಇಲಾಖೆಯಿಂದ 1,500 ಮಂದಿಗೆ ಅಗತ್ಯ ವಸ್ತುಗಳು, ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ. ಕಂದಾಯ ಇಲಾಖೆಯಿಂದ 420 ಮಂದಿಗೆ 94‘ಸಿಸಿ’ ಹಕ್ಕುಪತ್ರ, 165 ಪಿಂಚಣಿ ಆದೇಶಪತ್ರ ಹಾಗೂ 70 ಪಹಣಿ ವಿಸ್ತೀರ್ಣ ತಿದ್ದುಪಡಿ ಆದೇಶಗಳು ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಬಟ್ಟೆ ವಿತರಿಸಲಾಗಿದೆ’ ಎಂದು ಅವರು ತಿಳಿಸಿದರು.
ಲೋಕಾರ್ಪಣೆ: ಯಲಹಂಕದ ಹಳೆಯ ಹಾಗೂ ಉಪನಗರ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಬ್ಯಾಡ್ಮಿಂಟನ್ ಕೋರ್ಟ್, ಸರ್ಕಾರಿ ಶಾಲಾ ಕಟ್ಟಡಗಳು, ಉದ್ಯಾನ ಹಾಗೂ ಆಯುರ್ವೇದ ಆಸ್ಪತ್ರೆ ಕಟ್ಟಡವನ್ನು ವಿಶ್ವನಾಥ್ ಉದ್ಘಾಟಿಸಿದರು.
ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ನೂತನವಾಗಿ ಅಳವಡಿಸಿರುವ ಟಸ್ಕರ್ ವಿದ್ಯುತ್ ದೀಪಗಳು ಹಾಗೂ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅನಾವರಣಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.