ಬೆಂಗಳೂರು: ಹೆಲ್ಮೆಟ್ ಧರಿಸಿ ಸಂಬಂಧಿಕರ ಮನೆಯಲ್ಲಿ ಕಳವು ಮಾಡಿದ್ದ ಆರೋಪದಡಿ ಶ್ರೀನಿವಾಸ್ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ಶ್ರೀನಿವಾಸ್, ಸಿವಿಲ್ ಗುತ್ತಿಗೆದಾರನಾಗಿದ್ದ. ಸೆ.30 ರಂದು ಸಂಬಂಧಿಕರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಪುರಾವೆ ಸಂಗ್ರಹಿಸಿ ಆತನನ್ನು ಬಂಧಿಸಲಾಗಿದ್ದು, ₹ 10 ಲಕ್ಷ ಮೌಲ್ಯದ 260 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸಂಬಂಧಿಕರ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಆರೋಪಿ, ಚಿನ್ನಾಭರಣ ಹಾಗೂ ನಗದು ಇರುವುದನ್ನು ನೋಡಿದ್ದ. ಸಂಬಂಧಿಕರು ಬೆಳಿಗ್ಗೆ ಕೆಲಸಕ್ಕೆ ಹೋದರೆ ರಾತ್ರಿಯೇ ಮನೆಗೆ ಬರುವುದೆಂಬುದನ್ನು ತಿಳಿದಿದ್ದ. ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದ ಆತ, ಕಳ್ಳತನ ಮಾಡಿ ಹಣ ಸಂಪಾದಿಸಲು ಮುಂದಾಗಿದ್ದ’ ಎಂದೂ ತಿಳಿಸಿದರು.
ಹೂವಿನ ಕುಂಡದಲ್ಲಿದ್ದ ಕೀ: ‘ಆರೋಪಿಯ ಸಂಬಂಧಿ ಆಗಿರುವ ದೂರುದಾರ, ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಅವರ ಪತ್ನಿ ಮಾತ್ರ ಮನೆಯಲ್ಲಿದ್ದರು. ಸಂಜೆ 4.15 ಗಂಟೆ ಸುಮಾರಿಗೆ ಪತ್ನಿ ಸಹ ಯೋಗ ತರಗತಿಗೆಂದು ಹೊರಗಡೆ ಹೋಗಿದ್ದರು. ಮನೆಯ ಬೀಗ ಹಾಕಿ, ಬಾಗಿಲು ಬಳಿ ಇದ್ದ ಹೂವಿನ ಕುಂಡದಲ್ಲಿ ಕೀ ಇರಿಸಿದ್ದರು’ ಎಂದು ಪೊಲೀಸರು ವಿವರಿಸಿದರು.
‘ಕುಂಡದಲ್ಲಿ ಕೀ ಇರುವುದನ್ನು ತಿಳಿದಿದ್ದ ಆರೋಪಿ, ಹೆಲ್ಮೆಟ್ ಧರಿಸಿಕೊಂಡು ಸಂಜೆ 4.30ರ ಸುಮಾರಿಗೆ ಮನೆ ಬಳಿ ಬಂದಿದ್ದ. ಬಾಗಿಲು ತೆರೆದು ಒಳ ನುಗ್ಗಿದ್ದ. ಮನೆಯಲ್ಲೆಲ್ಲ ಹುಡುಕಾಡಿ, ಚಿನ್ನಾಭರಣ ಕದ್ದು ಪರಾರಿಯಾಗಿದ್ದ’ ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.