ADVERTISEMENT

ಅಪಘಾತ: ಎಸ್‌ಐ, ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 18:31 IST
Last Updated 31 ಮಾರ್ಚ್ 2022, 18:31 IST
   

ಬೆಂಗಳೂರು: ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಅಪಘಾತ ಸಂಭವಿಸಿದ್ದು, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ಸಬ್‌ ಇನ್‌ಸ್ಪೆಕ್ಟರ್‌ ಸ್ವಾಮಿಗೌಡ (54) ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿ ಅಮ್ಮರ್ ಸುಲೆಹಾ (22) ಎಂಬುವರು ಮೃತಪಟ್ಟಿದ್ದಾರೆ.

‘ಮೃತ ಸ್ವಾಮಿಗೌಡ, ಹಾಸನದ ಅರಕಲಗೂಡಿನವರು. ಯಲಹಂಕದ ಸಿಆರ್‌ಪಿಎಫ್‌ ಕ್ಯಾಂಪಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಯೆಮೆನ್ ದೇಶದ ಪ್ರಜೆ ಅಮ್ಮರ್, ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ರಾತ್ರಿ ಪಾಳಿಯಲ್ಲಿದ್ದ ಸ್ವಾಮಿಗೌಡ, ಕ್ಯಾಂಪಸ್‌ ಹಾಗೂ ಸುತ್ತಮುತ್ತ ಸಿಬ್ಬಂದಿಗಳ ಹಾಜರಿ ಪರಿಶೀಲಿಸುತ್ತಿದ್ದರು. ರಾತ್ರಿ 11.30ರ ಸುಮಾರಿಗೆ ಕ್ಯಾಂಪಸ್‌ನ ಪೂರ್ವ ಪ್ರವೇಶ ದ್ವಾರದ ಎದುರು ನಡೆದುಕೊಂಡು ಒಳಗೆ ಹೊರಟಿದ್ದರು. ಯಲಹಂಕ ಕಡೆಯಿಂದ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದಿದ್ದ ಅಮ್ಮರ್, ನಿಯಂತ್ರಣ ಕಳೆದುಕೊಂಡು ಸ್ವಾಮಿ ಅವರಿಗೆ ಗುದ್ದಿಸಿದ್ದರು.’

ADVERTISEMENT

‘ಸ್ವಾಮಿಗೌಡ ಹಾಗೂ ಅಮ್ಮರ್‌ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು. ಸಿಆರ್‌ಪಿಎಫ್‌ ಸಿಬ್ಬಂದಿ ಹಾಗೂ ಸ್ಥಳೀಯರೇ ಅವರಿಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರಿಬ್ಬರು ಅಸುನೀಗಿದರು. ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ಕಳಚಿದ್ದ ಹೆಲ್ಮೆಟ್: ‘ಅಮ್ಮರ್ ಅವರು ಹೆಲ್ಮೆಟ್ ಧರಿಸಿದ್ದರು. ಆದರೆ, ಬಟನ್ ಲಾಕ್‌ ಮಾಡಿರಲಿಲ್ಲ. ಅಪಘಾತವಾಗುತ್ತಿದ್ದಂತೆ ಹೆಲ್ಮೆಟ್‌ ಕಳಚಿತ್ತು. ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.