ADVERTISEMENT

ಉಪನಗರ ರೈಲು ಪುನರಾರಂಭಕ್ಕೆ ಒತ್ತಾಯ

ಬೆಂಗಳೂರು ನಗರದಿಂದ ಹೊಸೂರಿಗೆ ಸಂಪರ್ಕ ಕಲ್ಪಿಸುವ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
 ಸಂಸದ ಪಿ.ಸಿ. ಮೋಹನ್‌
ಸಂಸದ ಪಿ.ಸಿ. ಮೋಹನ್‌   

ಬೆಂಗಳೂರು:ನಗರದಿಂದ ಹೊಸೂರಿಗೆ ಸಂಪರ್ಕ ಕಲ್ಪಿಸುವ ಎರಡು ಉಪನಗರ ರೈಲುಗಳನ್ನು ರದ್ದುಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಂಸದ ಪಿ.ಸಿ. ಮೋಹನ್‌ ಅವರು ನೈಋತ್ಯ ರೈಲ್ವೆ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.

ಉಪನಗರ ರೈಲುಗಳು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬರುವ ಅದೆಷ್ಟೋ ಜನರಿಗೆ ಸಹಾಯಕವಾಗಿದ್ದವು. ಆದರೆ, ಹಳಿ ನವೀಕರಣದ ಕಾರಣ ಮುಂದಿಟ್ಟುಕೊಂಡು ಈ ರೈಲುಗಳನ್ನು ರದ್ದುಗೊಳಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡ ಕ್ರಮ ಇದಾದರೂ ಆ ಕಾಮಗಾರಿಗೆ ಹೆಚ್ಚುವರಿ ಕಾರ್ಮಿಕರು ಮತ್ತು ಯಂತ್ರಗಳನ್ನು ಬಳಸಿ ಬೇಗನೆ ಪೂರ್ಣಗೊಳಿಸಬೇಕು. ರದ್ದಾಗಿರುವ ರೈಲುಗಳನ್ನು ಪುನರಾರಂಭಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ವಿಷಯವನ್ನು ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಅವರ ಗಮನಕ್ಕೂ ತರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನಗರದ ಪ್ರಮುಖ ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣದ ಸ್ಥಿತಿಗತಿಯ ಬಗ್ಗೆಯೂ ಮೋಹನ್‌ ಅವರು ವ್ಯವಸ್ಥಾಪಕರಿಂದ ಮಾಹಿತಿ ಕೇಳಿದ್ದಾರೆ.

ADVERTISEMENT

ಚನ್ನಪ್ಪನಹಳ್ಳಿ, ಬೈಯಪ್ಪನಹಳ್ಳಿ ಮತ್ತು ಕಾರ್ಮೆಲ್‌ರಾಮ್‌ನ ರೈಲ್ವೆ ಮೇಲು ಸೇತುವೆ, ಪನತೂರಿನ ರೈಲ್ವೆ ಕೆಳ ಸೇತುವೆ ನಿರ್ಮಾಣದ ಸ್ಥಿತಿಗತಿ ಕುರಿತು ಅವರು ಮಾಹಿತಿ ಕೇಳಿದ್ದಾರೆ.

ಬೈಯಪ್ಪನಹಳ್ಳಿ – ಸೇಲಂ ಮಾರ್ಗವನ್ನು ದ್ವಿಪಥಗೊಳಿಸಲಾಗಿದೆ. ಇದರಿಂದ ಎರಡು ಲೆವೆಲ್‌ ಕ್ರಾಸ್‌ಗಳನ್ನು ತಪ್ಪಿಸಬಹುದು. ಇಂಥ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಮುಂದಿನ ಎರಡು ತಲೆಮಾರುಗಳನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕು ಎಂದು ಅವರು ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.