ಬೆಂಗಳೂರು: ಮದುವೆಯಾಗಿ 25ನೇ ದಿನಕ್ಕೆಶಂಕರ್ (24) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿಲಕ್ಷಿತಾ (19) ವಿರುದ್ಧ ಪ್ರಕರಣ ದಾಖಲಾಗಿದೆ.
‘ಎಂ.ಸಿ. ಗಾರ್ಡನ್ ನಿವಾಸಿ ಆಗಿದ್ದ ಶಂಕರ್, ಬಿಪಿಒ ಉದ್ಯೋಗಿ. ಆತ್ಮಹತ್ಯೆ ಬಗ್ಗೆ ದೂರು ನೀಡಿರುವ ಅವರ ಪೋಷಕರು, ‘ಮಗನ ಆತ್ಮಹತ್ಯೆಗೆ ಪತ್ನಿಯೇ ಪ್ರಚೋದನೆ ನೀಡಿದ್ದಾಳೆ’ ಎಂದು ಆರೋಪಿಸಿದ್ದಾರೆ’ ಎಂದು ಹಲಸೂರು ಠಾಣೆ ಪೊಲೀಸರು ಹೇಳಿದರು.
‘ಹಲವು ವರ್ಷಗಳಿಂದ ಲಕ್ಷಿತಾ ಹಾಗೂ ಶಂಕರ್ ಪ್ರೀತಿಸುತ್ತಿದ್ದರು. ಏಪ್ರಿಲ್ 18ರಂದು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಸಹ ಆಗಿದ್ದರು. ಅದಾದ ಬಳಿಕ ತವರು ಮನೆಗೆ ಹೋಗಿದ್ದ ಲಕ್ಷಿತಾ, ವಾಪಸು ಬಂದಿರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ.’
‘ಪತ್ನಿ ಬಾರದಿದ್ದರಿಂದ ನೊಂದಿದ್ದ ಶಂಕರ್, ‘ನೀನು ಕರೆ ಸ್ವೀಕರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಸಂದೇಶ ಕಳುಹಿಸಿದ್ದರು. ಆಗ ಪತ್ನಿ, ‘ಹೋಗಿ ಸಾಯಿ’ ಎಂದಿದ್ದರು. ಮತ್ತಷ್ಟು ನೊಂದು ಮೇ 12ರಂದು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.