ಬೆಂಗಳೂರು: ‘ನನ್ನ ಸಾವಿಗೆ ಹೆಂಡತಿ ಮತ್ತು ಅವರ ಮನೆಯವರೇ ಕಾರಣ’ ಎಂದು ಪತ್ರ ಬರೆದಿಟ್ಟು ಎಸ್.ಶ್ರೀನಿವಾಸ್ (34) ಎಂಬ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಗುಂಟೆ ಸಮೀಪದ ಮಂಜುನಾಥನಗರ 1ನೇ ಮುಖ್ಯರಸ್ತೆ ನಿವಾಸಿಯಾದ ಅವರು, ಮೇ 17 ರಿಂದ 19ರ ನಡುವೆ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ದೇವಸ್ಥಾನಕ್ಕೆ ಹೋಗಿದ್ದ ಕುಟುಂಬ ಸದಸ್ಯರು, ಭಾನುವಾರ ರಾತ್ರಿ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶ್ರೀನಿವಾಸ್ ಅಣ್ಣ ರವೀಶ್ವರ್ ಕೊಟ್ಟಿರುವ ದೂರು ಹಾಗೂ ಮರಣ ಪತ್ರ ಆಧರಿಸಿ ಮೃತರ ಪತ್ನಿ ಸುಮಾ, ಆಕೆಯ ತಂದೆ ಗಂಗಣ್ಣ, ತಾಯಿ ಶಾರದಾ ಹಾಗೂ ಅಣ್ಣ ಸುನೀಲ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ (ಐಪಿಸಿ 306) ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಬಾಗಲಗುಂಟೆ ಪೊಲೀಸರು ಹೇಳಿದರು.
‘ನನ್ನ ಕಾರನ್ನು ಬಾಡಿಗೆ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಶ್ರೀನಿವಾಸ್, ಒಂದೂವರೆ ವರ್ಷದ ಹಿಂದೆ ಸುಮಾ ಎಂಬಾಕೆಯನ್ನು ವಿವಾಹವಾದ. ಮದುವೆ ನಂತರ ಸುಮಾ ಹಾಗೂ ಆಕೆಯ ಕುಟುಂಬ ಸದಸ್ಯರು ಆತನಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವುದು ತಡವಾದರೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರು. ಅವರ ವರ್ತನೆಯಿಂದ ಸೋದರ ತುಂಬ ಬೇಸರಗೊಂಡಿದ್ದ’ ಎಂದು ಶ್ರೀನಿವಾಸ್ ಅಣ್ಣ ರವೀಶ್ವರ್ ದೂರಿನಲ್ಲಿ ಹೇಳಿದ್ದಾರೆ.
‘ಒಂದೂವರೆ ತಿಂಗಳ ಹಿಂದೆ ಸುಮಾ ಬೇರೆ ಮನೆ ಮಾಡುವ ನೆಪದಲ್ಲಿ ತನ್ನೊಟ್ಟಿಗೆ ಗಂಡನನ್ನೂ ತವರು ಮನೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಇಡೀ ಕುಟುಂಬವೇ ಆತನಿಗೆ ಚಿತ್ರಹಿಂಸೆ ನೀಡುತ್ತಿತ್ತು. ಇತ್ತೀಚೆಗೆ ಪತ್ನಿಯ ಕುಟುಂಬ ತೊರೆದು ಆತ ಮನೆಗೆ ಮರಳಿದ್ದ. ಮೇ 17ರಂದು ನಾವು ದೇವಸ್ಥಾನಕ್ಕೆ ತೆರಳಿದ ನಂತರ ಶ್ರೀನಿವಾಸ್ ನೇಣಿಗೆ ಶರಣಾಗಿದ್ದಾನೆ. ಹೀಗಾಗಿ, ಈ ಸಾವಿಗೆ ಕಾರಣರಾದ ಸುಮಾ ಹಾಗೂ ಅವರ ಕುಟುಂಬದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.