ADVERTISEMENT

ತಮ್ಮನಿಗೆ ವಿಡಿಯೊ ಕರೆ ಮಾಡಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 21:30 IST
Last Updated 2 ನವೆಂಬರ್ 2019, 21:30 IST

ಬೆಂಗಳೂರು: ‘ಪತಿಯ ಕಿರುಕುಳದಿಂದ ಬೇಸತ್ತಿದ್ದರು’ ಎನ್ನಲಾದ ಅರುಣಾ ಮೇರಿ (28) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದು, ಆ ಸಂಬಂಧ ಪತಿ ಆನಂದ್ ರಾಜ್‌ ಎಂಬುವವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆನಂದ್‌ ರಾಜ್‌, ಅರುಣಾ ಅವರ ಸಂಬಂಧಿ. ಈ ದಂಪತಿಗೆ 7 ವರ್ಷದ ಮಗಳಿದ್ದಾಳೆ. ತಮ್ಮ ಹಾಗೂ ಆತನ ಪತ್ನಿಗೆ ಕೊನೆ ಬಾರಿ ವಿಡಿಯೊ ಕರೆ ಮಾಡಿ ಕಡಿತಗೊಳಿಸಿದ್ದ ಅರುಣಾ, ಮನೆಯಲ್ಲೇ ಫ್ಯಾನಿಗೆ ನೇಣು ಹಾಕಿಕೊಂಡು
ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆತ್ಮಹತ್ಯೆ ಸ್ಥಳದಲ್ಲಿ ಮರಣ ಪತ್ರ ಸಿಕ್ಕಿದೆ. ‘ನನ್ನ ಸಾವಿಗೆ ಗಂಡನೇ ಕಾರಣ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಅರುಣಾ ಅವರ ತಾಯಿ ರುಬಿನಾ ನೀಡಿ ರುವ ದೂರು ಆಧರಿಸಿ ಆನಂದ್‌ ರಾಜ್‌ ಅವರನ್ನು ಬಂಧಿಸಲಾಗಿದೆ’ ಎಂದರು.

ADVERTISEMENT

‘ಆರೋಪಿ ಆನಂದ್ ರಾಜ್ ಕಾರು ತೊಳೆಯುವ ಕೆಲಸ ಮಾಡುತ್ತಿದ್ದ. ಅರುಣಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಬೇರೊಬ್ಬರ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿ ದ್ದಿಯಾ ಎಂದು ಪತ್ನಿ ಜೊತೆ ಆರೋಪಿ ನಿತ್ಯವೂ ಜಗಳ ಮಾಡುತ್ತಿದ್ದ. ದೀಪಾವಳಿಯ ದಿನ ಕಚೇರಿಗೆ ಹೋಗಿ ಬಂದಿದ್ದ ಪತ್ನಿ ಮೇಲೆ ಅನುಮಾನಪಟ್ಟು ಹಲ್ಲೆ ಸಹ ಮಾಡಿದ್ದ’.

‘ಪತಿಯ ಕಿರುಕುಳದಿಂದ ಬೇಸತ್ತ ಅರುಣಾ, ಅ. 31ರಂದು ಬೆಳಿಗ್ಗೆ ಸಹೋ ದರ ಹಾಗೂ ಆತನ ಪತ್ನಿಗೆ ವಿಡಿಯೊ ಕರೆ ಮಾಡಿದ್ದರು. ‘ನಿಮ್ಮನ್ನು ಇದೇ ಕೊನೆಯ ಬಾರಿ ನೋಡುತ್ತಿದ್ದೇನೆ. ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದರು. ಗಾಬರಿಗೊಂಡ ಕುಟುಂಬದವರು, ಅರುಣಾ ಅವರ ಮನೆಗೆ ಬಂದಿದ್ದರು. ಅಷ್ಟರಲ್ಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದರು’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.