ಬೆಂಗಳೂರು: ಮಾಂಸದ ಅಡುಗೆ ಮಾಡದಿದ್ದಕ್ಕೆ ಪತ್ನಿ ಜೊತೆ ಜಗಳವಾಡಿದ್ದ ರಾಜು ಎಂಬುವರು ಬೆಂಕಿ ಮನೆಯಲ್ಲಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಗಮ್ಮನಗುಡಿ ಬಳಿಯ ಕಲಾನಗರದ ನಿವಾಸಿಯಾಗಿದ್ದ ರಾಜು, ಪೇಂಟರ್ ಆಗಿದ್ದರು. ಭಾನುವಾರ ಸಂಜೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಸಂಬಂಧ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮಾಂಸದ ಅಡುಗೆ ಮಾಡುವಂತೆ ಪತ್ನಿಗೆ ಹೇಳಿ ಮಧ್ಯಾಹ್ನ ಮನೆಯಿಂದ ಹೊರಹೋಗಿದ್ದ ರಾಜು, ಕುಡಿದ ಅಮಲಿನಲ್ಲಿ ಸಂಜೆ ವಾಪಸ್ ಬಂದಿದ್ದರು. ಆದರೆ, ಪತ್ನಿಯು ಮಾಂಸದೂಟ ಮಾಡಿರಲಿಲ್ಲ. ಅಷ್ಟಕ್ಕೆ ಕೋಪಗೊಂಡು ಹಲ್ಲೆ ಮಾಡಿದ್ದ’ ಎಂದು ಗಂಗಮ್ಮನಗುಡಿ ಪೊಲೀಸರು ಹೇಳಿದರು.
‘ಪತ್ನಿ, ಮಾಂಸವನ್ನು ತರಲು ಅಂಗಡಿಗೆ ಹೋಗಿದ್ದರು. ಅದೇ ವೇಳೆ ರಾಜು, ಪೇಂಟಿಂಗ್ಗೆ ಬಳಸುವ ಥಿನ್ನರ್ ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಬೆಂಕಿ ಕೆನ್ನಾಲಗೆ ಹೆಚ್ಚಾಗಿ ಇಡೀ ಕೊಠಡಿ ಆವರಿಸಿತ್ತು. ರಾಜು ಅದೇ ಕೊಠಡಿಯಲ್ಲಿ ಸುಟ್ಟು ಹೋಗಿದ್ದಾರೆ’ ಎಂದರು.
‘ಘಟನೆ ಬಗ್ಗೆ ರಾಜು ಅವರ ಪತ್ನಿ ದೂರು ನೀಡಿದ್ದಾರೆ. ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶವದ ಮರಣೋತ್ತರ ಪರೀಕ್ಷೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.