ADVERTISEMENT

‘ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ’

ಆರ್‌.ಆರ್‌.ನಗರ ಮತದಾರರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 19:51 IST
Last Updated 31 ಅಕ್ಟೋಬರ್ 2020, 19:51 IST

ಬೆಂಗಳೂರು: ‘ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ. ಕ್ಷೇತ್ರದಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನೂ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರು.

ಜ್ಞಾನಭಾರತಿ, ಕೊಟ್ಟಿಗೆಪಾಳ್ಯ, ಲಗ್ಗೆರೆ, ಲಕ್ಷ್ಮೀದೇವಿನಗರ, ಎಚ್‌.ಎಂ.ಟಿ., ಜಾಲಹಳ್ಳಿ, ಜೆ.ಪಿ. ಪಾರ್ಕ್‌ ಮತ್ತು ಯಶವಂತಪುರ ವಾರ್ಡ್‌ಗಳಲ್ಲಿ ಶನಿವಾರ ಇಡೀ ದಿನ ರೋಡ್‌ ಷೋ, ಬಹಿರಂಗ ಸಭೆಗಳನ್ನು ನಡೆಸಿದ ಅವರು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ₹ 820 ಕೋಟಿ ಅನುದಾನ ನೀಡಲಾಗಿದೆ. ಇನ್ನೂ ಹಲವು ಕಾಮಗಾರಿಗಳು ಆಗಬೇಕಿದೆ. ಕ್ಷೇತ್ರದ ಹಲವು ಕಡೆ ತಗ್ಗು ಪ್ರದೇಶಗಳಿವೆ. ಮಳೆ ಸುರಿದಾಗ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತಿದೆ. ಈಸಮಸ್ಯೆಗೂ ಆದಷ್ಟು ಬೇಗ ಪರಿಹಾರ ದೊರಕಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು.

ADVERTISEMENT

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರು ಮಾಡುತ್ತಿರುವ ಆರೋಪಗಳಿಗೆ ಕಿವಿಗೊಡಬಾರದು. ಕ್ಷೇತ್ರವನ್ನು ಸಮಗ್ರವಾಗಿ
ಅಭಿವೃದ್ಧಿಪಡಿಸುವುದು ನನ್ನ ಗುರಿ. ಬಿಜೆಪಿ ಶಾಸಕರೇ ಇದ್ದರೆ ನನ್ನ ಕೈ ಮತ್ತಷ್ಟು ಬಲಗೊಳ್ಳುತ್ತದೆ. ಮುನಿರತ್ನ ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದಾರೆ. ನಿರಂತರವಾಗಿ ಜನರ ಜತೆಗಿರುವ ವ್ಯಕ್ತಿ. ಮತ್ತೆ ಅವರ ಬೆಂಬಲಕ್ಕೆ ನಿಲ್ಲಿ’ ಎಂದು ಸಾರ್ವಜನಿಕ ಸಭೆಗಳಲ್ಲಿ ಮನವಿ ಮಾಡಿದರು.

ಮುನಿರತ್ನ, ಸಚಿವರಾದ ಆರ್‌.ಅಶೋಕ, ಬೈರತಿ ಬಸವರಾಜ, ಶಾಸಕರಾದ ಅರವಿಂದ ಲಿಂಬಾವಳಿ, ಶಿವನಗೌಡ ನಾಯಕ್‌ ಸೇರಿದಂತೆ ಹಲವು ಮುಖಂಡರು ರೋಡ್‌ ಷೋನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.